ಅಡ್ಡೂರು: ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಗರಡಿ ಜಂಕ್ಷನ್ ನಲ್ಲಿ ಫೈವ್ ಸ್ಟಾರ್ ಯಂಗ್ ಬಾಯ್ಸ್ ಇದರ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯವರ ಕನಸಿನ ಗ್ರಾಮರಾಜ್ಯದ ಚಿಂತನೆ ಪರಿಪೂರ್ಣಗೊಳ್ಳುವಿಕೆಯಲ್ಲಿ ಯುವಕರ ಪಾತ್ರ ಮಹತ್ತರವಾಗಿದ್ದು, ಆದ್ದರಿಂದ ಯುವಕರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಇನ್ನಷ್ಟು ಮುಂದಾಗಬೇಕು ಎಂದು ಸಲಹೆ ನೀಡಿದರು.
ಫೈವ್ ಸ್ಟಾರ್ ಯಂಗ್ ಬಾಯ್ಸ್ ಕ್ಲಬ್ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳು ಸಮಾಜೋಪಾಯವಾಗಿದ್ದು, ಗ್ರಾಮವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಲು ಈ ಯುವಕರು ಶ್ರಮದಾನದ ಮೂಲಕ ಹಗಲಿರುಳೆನ್ನದೆ ದುಡಿಯುತ್ತಿರುವುದು ಮುಂದಿನ ಯುವ ಪೀಳಿಗೆಗೆ ಮಾದರಿ ಎಂದು ಶ್ಲಾಘಿಸಿದರು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಜಿ.ಪಂ.ಸದಸ್ಯ ಯು.ಪಿ. ಇಬ್ರಾಹೀಂ, ಗ್ರಾಮವನ್ನು ಅಭಿವೃದ್ಧಿಯತ್ತ ಸಾಗಿಸಲು ಹಲವಾರು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಚರಂಡಿ ಹಾಗೂ ಮಣ್ಣು ಮುಕ್ತ ಗ್ರಾಮವನ್ನಾಗಿಸಲು ಕಟಿ ಬದ್ಧರಾಗೋಣ. ಇದಕ್ಕೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ ಎಂದರು.
ಸಮಾಜ ಸೇವೆಯಲ್ಲಿ ಕ್ರೀಡೆಯು ಅತೀ ಅಗತ್ಯವಾಗಿದ್ದು, ಕ್ರೀಡೆ ಸೌಹಾರ್ದತೆಯ ಸಂಕೇತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ಜಾತಿಯ ಬಣ್ಣ ಹಚ್ಚಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಫೈವ್ ಸ್ಟಾರ್ ಸಂಸ್ಥೆಯ ತನ್ನ ವಿಶಿಷ್ಟ ಕೊಡುಗೆಯಿಂದ ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತಿದ್ದು, ಮುಂದೆಯು ಇಂತಹ ಕಾರ್ಯಕ್ರಮಗಳು ಆಯೋಜಿಸಿ ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲಿ ಎಂದು ಹಾರೈಸಿದರು.
ಈ ವೇಳೆ ಸಮಾಜ ಸೇವಕ, ಕ್ರೀಡಾಪಟುಗಳಿಗೆ ಸನ್ಮಾನ, ವಿದ್ಯಾಥಿಗಳಿಗೆ, ವಿಶಿಷ್ಟ ಮಕ್ಕಳಿಗೆ ಪ್ರೋತ್ಸಾಹ ಧನ, ಅರ್ಹ ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ತ್ಯಾಜ್ಯ ಸಂಗ್ರಹ ಬುಟ್ಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಅಬ್ದುಲ್ ರಹಿಮಾನ್ ಬಂಡಸಾಲೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಟಿ.ಸೈಯ್ಯದ್ ತೋಕೂರು ಮಾತನಾಡಿದರು. ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷ ಹಭಿಬ್ ಕಟ್ಟಪುಣಿ, ಗುರುಪುರ ಗ್ರಾ.ಪಂ. ಅಧ್ಯಕ್ಷೆ ರುಕಿಯಾ, ತಾ.ಪಂ. ಸಚಿನ್ ಅಡಪ, ಪಿಎಫ್ ಐ ಅಡ್ಡೂರು ಘಟಕ ಅಧ್ಯಕ್ಷ ಹಕೀಂ ಪಾಂಡೇಲ್, ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಜಫ್ರಿಯನ್ ತಾವ್ರೊ, ಗುರುಪುರ ಗ್ರಾ.ಪಂ. ಸದಸ್ಯರಾದ ಎ.ಕೆ. ಮೊಹಮ್ಮದ್ ಕಲ್ಲಕಲಂಬಿ, ಜಲೀಲ್ ಮತ್ತಿರರು ಭಾಗವಹಿಸಿದ್ದರು.






















