ಪಡುಬಿದ್ರಿ: ಬಣ್ಣದ ಜತೆ ಆಟವಾಡಿ, ತಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಕಲಾ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ ಎಂದು ಉಡುಪಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ ಹೇಳಿದರು.ಪಡುಬಿದ್ರಿ ರೋಟರಿ ಕ್ಲಬ್, ಸಾಯಿರಾಧ ಹೆರಿಟೇಜ್ ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ಕಡಲಕಿನಾರೆಯಲ್ಲಿ ಉಭಯ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಚಿತ್ರಬಿಡಿಸುವ ಸ್ಪರ್ಧೆ ವರ್ಣ ವಿಹಾರ -2017 ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿ ವಿಭಿನ್ನ ಕಲೆಗಳಿರುತ್ತದೆ. ಅವರ ಆ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದ್ದು, ಅವರ ಕಲಾ ಪ್ರತಿಭೆಗೆ ಎಂದು ಅಡ್ಡಿಯಾಗಬಾರದು ಎಂದರು.
ಚಿತ್ರಕಲೆಗಳಲ್ಲಿ ನಾನಾ ವಿಧಗಳು ಇವೆ. ಎಲ್ಲಾ ಕಲೆಗಳಲ್ಲೂ ನೀವು ಕೈಯಾಡಿಸಿ ಅದರಲ್ಲಿ ಪರಿಣಿತರಾದರೆ ಮುಂದಿನ ಭವಿಷ್ಯ ಉಜ್ವಲವಾಗಬಹುದು ಎಂದು ಅಂತರಾಷ್ಟ್ರೀಯ ಚಿತ್ರಕಲಾವಿದೆ ಶಬರಿ ಗಾಣಿಗ ಅಭಿಪ್ರಾಯಪಟ್ಟರು.ರೋಟರಿ ಕ್ಲಬ್ ಅಧ್ಯಕ್ಷ ರಮೀಝ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಗ್ರಾಪಂ ಸದಸ್ಯರಾದ ಬುಡಾನ್ ಸಾಹೇಬ್, ಸೇವಂತಿ ಸದಾಶಿವ್, ರವಿ ಶೆಟ್ಟಿ, ವಲಯ ಸಂಯೋಜಕ ಹೇಮಚಂದ್ರ, ಸಾಯಿರಾಧ ಹೆರಿಟೇಜ್ನ ಸಂಯೋಜಕ ಅಭಿಜಿತ್, ಕಾರ್ಯದರ್ಶಿ ಸಂದೀಪ್ ಫಲಿಮಾರ್, ಕೇಶವ ಸಾಲ್ಯಾನ್ ಇದ್ದರು.
100ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
5ರಿಂದ 7ರ ವಿಭಾಗದ ಪ್ರಕೃತಿಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಪ್ರಾಪ್ತಿ ಪ್ರದೀಪ್(ಪ್ರಥಮ), ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಯ ಲೀಶಾ (ದ್ವಿತೀಯ), ವಿದ್ಯೋದಯ ಪಬ್ಲಿಕ್ ಸ್ಕೂಲ್ನ ಪ್ರಾರ್ಥನಾ ಹೆಬ್ಬಾರ್ (ತೃತೀಯ). ಹಾಗೂ ಎಂಟರಿಂದ 10ನೇ ತರಗತಿಯವರೆಗೆ ಕರಾವಳಿಯ ಕಡಲು ವಿಭಾಗದಲ್ಲಿ ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಯ ಹೃತೇಶ್ ಆರ್ಯ (ಪ್ರಥಮ), ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ತೇಜಸ್ ಬಿ.ರಾವ್ (ದ್ವಿತೀಯ) ಮತ್ತು ಕಾಪು ದಂಡತೀರ್ಥ ಪ್ರೌಡಶಾಲೆಯ ಶಿಶೀರ್ (ತೃತೀಯ) ಬಹುಮಾನ ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕಾಪು ಬಿಜೆಪಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗ್ರಾಪಂ ಸದಸ್ಯರಾದ ಅಶೋಕ್ ಸಾಲ್ಯಾನ್, ನವೀನ್ ಎನ್.ಶೆಟ್ಟಿ, ರಾಜೇಶ್ ಶೆಟ್ಟಿಗಾರ್ ಇದ್ದರು.
