ಮುಂಬಯಿ: ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ವತಿಯಿಂದ ಆಷಾಢದ ಅಡುಗೆ ಸ್ಪರ್ಧೆಯು ಜು. 31 ರಂದು ಅಂಧೇರಿ ವೀರದೇಸಾಯಿ ರೋಡ್, ಮೊಗವೀರ ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಎಸ್. ಪುತ್ರನ್ ಅವರು ಮಾತನಾಡಿ, ಯುವ ಪೀಳಿಗೆಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಲು ಹಾಗೂ ಸಮಾಜದ ಮಹಿಳೆಯರಲ್ಲಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಬಗ್ಗೆ ಅಭಿರುಚಿ ಬೆಳೆಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದ ಮಹಿಳೆಯರು ಇನ್ನಷ್ಟು ಸಂಘಟಿತರಾಗ ಬೇಕು ಎಂದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ಮಹಾಬಲ ಕುಂದರ್ ಮಾತನಾಡಿ, ಮಹಿಳಾ ವಿಭಾಗವು ಯಾವಾಗಲೂ ವಿನೂತನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು, ಅದರಲ್ಲೂ ಆಟಿ ತಿಂಗಳ ವಿಶೇಷ ಈ ಕಾರ್ಯಕ್ರಮವು ಯಶಸ್ವಿಯಾಗುವಲ್ಲಿ ಎಲ್ಲರ ಪ್ರಯತ್ನ ಅಭಿನಂದನೀಯ. ಮಹಿಳೆಯರು ಸಂಘಟಿತರಾಗಿ ಸಮಾಜವನ್ನು ಬಲಪಡಿಸಬೇಕು ಎಂದರು. ಮೊಗವೀರ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ಸುರೇಶ್ ಆರ್. ಕಾಂಚನ್ ಅವರು ಮಾತನಾಡಿ, ನಿಜಕ್ಕೂ ಇಂದಿನ ಕಾರ್ಯಕ್ರಮವು ನಮ್ಮ ಸಮಾಜಕ್ಕೆ ಖುಷಿ ಕೊಡುವ ಕಾರ್ಯಕ್ರಮವಾಗಿದೆ. ಸಂಘದ ಚರಿತ್ರೆಯಲ್ಲಿ ಮೊದಲ ಬಾರಿ ನಡೆದ ಅಡುಗೆ ಸ್ಪರ್ಧೆಯಲ್ಲಿ ನಾವು ನೋಡದೆ, ತಿನ್ನದೆ ಇದ್ದ ಪದಾರ್ಥಗಳ, ಖಾದ್ಯಗಳ ಸವಿಯನ್ನು ಉಣ್ಣುವಂತಾಯಿತು. ಸುಚಿತ್ರಾ ಅವರ ನೇತೃತ್ವದ ಮಹಿಳಾ ವಿಭಾಗವು ಒಮ್ಮತದಿಂದ ಆಯೋಜಿಸಿದ ಈ ಕಾರ್ಯಕ್ರಮವು ಸದಾ ನೆನಪಿನಲ್ಲಿರುವ ಯಶಸ್ವಿ ಕಾರ್ಯಕ್ರಮವಾಗಿದೆ. ಇದಕ್ಕೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಉತ್ತಮ ಸಹಕಾರವೂ ದೊರಕಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಗೋಪಾಲ್ ಎಸ್. ಪುತ್ರನ್ ಮಾತನಾಡಿ, ಉತ್ತಮ ರೀತಿಯಲ್ಲಿ ಅಡುಗೆ ಸ್ಪರ್ಧೆ ನಡೆದಿರುವುದು ಅಭಿನಂದನೀಯ. ಸುಚಿತ್ರಾ ಎಸ್. ಪುತ್ರನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ಬಳಿಕ ಆಯೋಜಿಸಿದ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಲ್ಲರು ಎಂಬುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.ಇಂದು ಮಹಿಳೆಯರು ತಯಾರಿಸಿದ ವಿಧವಿಧದ ತಿಂಡಿ-ತಿನಿಸುಗಳು, ಖಾದ್ಯಗಳು ಒದನ್ನೊಂದು ಮೀರಿಸಿವೆ. ಇದು ಒಂದು ಟೀಂ ವರ್ಕ್ನಿಂದ ಸಾಧ್ಯವಾಯಿತು ಎಂದು ಮೀರಾರೋಡ್ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಪುತ್ರನ್ ತಿಳಿಸಿದರು.ವೇದಿಕೆಯಲ್ಲಿ ಉದ್ಯಮಿ, ದಾನಿ ಶ್ರೀನಿವಾಸ ಕಾಂಚನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರುಗಳಾದ ಯಶೋದಾ ಎಸ್. ಕಾಂಚನ್, ಸುಧಾ ಜಿ. ಪುತ್ರನ್, ಸಂಘದ ಉಪಾಧ್ಯಕ್ಷ ರಮೇಶ್ ಬಂಗೇರ ಉಪಸ್ಥಿತರಿದ್ದರು. ದೂರದರ್ಶನದ ಪಾಕ ತಜ್ಞರಾದ ವೀಣಾ ಪ್ರಭು, ತುಷಾರ್ ದೇಶು¾ಕ್ ಅವರು ತೀರ್ಪುಗಾರರಾಗಿ ಸಹಕರಿಸಿದರು.
ರಾಜು ಶ್ರೀಯಾನ್, ರಮೇಶ್ ಬಂಗೇರ, ಸುರೇಶ್ ತೋಳಾರ್, ಮಾಧವ ಸುವರ್ಣ, ರವಿ ಕಾಂಚನ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮೀನಾಕ್ಷಿ ರಾಜು ಶ್ರೀಯಾನ್ ನಿರ್ವಹಿಸಿದರು. ಕಾರ್ಯದರ್ಶಿ ನ್ಯಾಯವಾದಿ ವಸಂತಿ ಕುಂದರ್ ವಂದಿಸಿದರು.
| ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್ |



