ಫರಂಗಿಪೇಟೆ: ಮೇ 29: ಅಧಿಕಾರವಿಲ್ಲದಿದ್ದರೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಪೂರೈಸುವ ಮೂಲಕ ಸೋಸಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಹೇಳಿದರು.

ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಮೆಮಾರ್ನಲ್ಲಿ ದಾನಿಗಳ ನೆರವಿನೊಂದಿಗೆ ಹಾಗೂ ಪಕ್ಷದ ಕಾರ್ಯಕರ್ತರ ಶ್ರಮದಿಂದ ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಚರಂಡಿಗೆ ಮೋರಿ ಅಳವಡಿಸುವ ಕಾಮಗಾರಿಗೆ ರವಿವಾರ ಮಧ್ಯಾಹ್ನ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ರಾಜಕೀಯ ಪಕ್ಷಗಳು ಅಭಿವೃದ್ಧಿ ಕಾರ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರು ವಾಸಿಸುವ ಪ್ರದೇಶಗಳನ್ನು ಕಡೆಗನಿಸುತ್ತಿವೆ. ಮೂಲಭೂತ ಸೌಕರ್ಯದಲ್ಲಿ ಅಮ್ಮೆಮಾರ್ ತೀರ ಹಿಂದುಳಿದಿರುವುದು ಇದಕ್ಕೊಂದು ಉದಾಹರಣೆಯಾಗಿದೆ ಎಂದ ಅವರು, ಇಲ್ಲಿನ ಜನರ ಹಲವಾರು ವರ್ಷದ ಬೇಡಿಕೆಯಲ್ಲೊಂದಾದ ಚರಂಡಿಗೆ ಪಕ್ಷದ ವತಿಯಿಂದ ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ ಮೋರಿ ಅಳವಡಿಸುತ್ತಿರುವುದು ಚುನಾವಣಾ ರಾಜಕೀಯಕ್ಕೆ ಸೀಮಿತವಾಗಿರುವ ಪಕ್ಷಗಳಿಗೆ ಮಾದರಿಯಾಗಿದೆ ಎಂದರು.
ಅಮ್ಮೆಮಾರ್ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫಾ ಯಮಾನಿ ದುಅ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಪಿಐ ರಾಜ್ಯ ಕಾರ್ಯದಶರ್ಿ ರಿಯಾಝ್ ಫರಂಗಿಪೇಟೆ ಮಾತನಾಡಿದರು. ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಸುಲೈಮಾನ್ ಉಸ್ತಾದ್, ಮಾಜಿ ಸದಸ್ಯ ಇಕ್ಬಾಲ್, ತುಂಬೆ ಗ್ರಾಪಂ ಸದಸ್ಯ ಝಹೂರ್ ಅಹ್ಮದ್, ಅಮ್ಮೆಮಾರ್ ಜುಮಾ ಮಸೀಸಿಯ ಕಾರ್ಯದರ್ಶಿ ಅಬೂಸಾಲಿ ಉಸ್ತಾದ್ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು. ಖಾದರ್ ಕಾರ್ಯಕ್ರಮ ನಿರೂಪಿಸಿದರು.
