ಬಂಟ್ವಾಳ: ಮಂಗಳೂರು- ಬೆಂಗಳೂರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಪರಿಸರದಲ್ಲಿ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಇರುವ ತ್ಯಾಜ್ಯ ತೊಟ್ಟಿ ತುಂಬಿ ತುಳುಕುತ್ತಿದೆ. ಮಾತ್ರವಲ್ಲದೆ ಅದರೊಳಗಿರ ಬೇಕಾದ ಕಸ ಸುತ್ತಲೂ ಹರಡಿ ರಾಷ್ಟ್ರೀಯ ಹೆದ್ದಾರಿಯನ್ನು ಆಕ್ರಮಿಸಿಕೊಳ್ಳುತ್ತಿದೆ.
ಈ ತ್ಯಾಜ್ಯ ಸಮಸ್ಯೆಯ ಸಂಪೂರ್ಣ ಕೊಡುಗೆ ಸಲ್ಲುವುದು ಪುದು ಗ್ರಾಮಪಂಚಾಯತ್ಗೆ. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬೇಕಾದಷ್ಟು ಸ್ಥಳವಕಾಶ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ತ್ಯಾಜ್ಯ ತೊಟ್ಟಿಯನ್ನು ನಿರ್ಮಿಸಿರುವುದು ಯಾಕೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡಲಾರಂಭಿಸಿದೆ. ಹೆದ್ದಾರಿ ಪಕ್ಕ ತೊಟ್ಟಿ ಇಟ್ಟು ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.
ಸ್ಥಳೀಯ ಹೊಟೇಲ್ ಮತ್ತು ಅಂಗಡಿದಾರರು ಹೆದ್ದಾರಿಯಲ್ಲಿ ಸಂಚರಿಸುವವರು ಇದೇ ತೊಟ್ಟಿಗೆ ಕಸ ಎಸೆಯುತ್ತಾರೆ. ಆದರೆ ತ್ಯಾಜ್ಯ ತೊಟ್ಟಿಯನ್ನು ತುಂಬುವ ಬದಲು ಅದರ ಸತ್ತ ರಾಶಿ ಬೀಳುತ್ತಿದೆ. ಕಾಗೆ, ನಾಯಿ ಮೊದಲಾದ ಪ್ರಾಣಿ ಪಕ್ಷಿಗಳು ತ್ಯಾಜ್ಯದಲ್ಲಿ ಆಹಾರ ಹುಡುಕುವ ಬರದಲ್ಲಿ ಅವುಗಳನ್ನು ರಸ್ತೆಗೆ ಎಳೆದುಕೊಂಡು ತರುತ್ತದೆ.
ಇದರಿಂದಾಗಿ ದಾರಿಹೋಕರು ಮೂಗುಮುಚ್ಚಿ ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಸವನ್ನು ತೊಟ್ಟಿಗೆ ಎಸೆಯಬೇಕು ಎಂದು ಪಂಚಾಯತ್ ಸೂಚನಾ ಫಲಕ ಅಳವಡಿಸಿದ್ದರೂ ಅದರಲ್ಲಿನ ಬರಹಗಳೆಲ್ಲಾ ಅಳಿಸಿ ಹೋಗಿ ಕೇವಲ ನಾಮ ಫಲಕವಸ್ಟೇ ಉಳಿದಿದೆ.


