ಕೈಕಂಬ : ವಿಶ್ವಹಿಂದೂ ಪರಿಷತ್, ಬಜರಂಗ ಶಾಖೆ ಭವಂತಿಬೆಟ್ಟುಮಳಲಿ, ದಳ ಆಂಜನೇಯ ಜವನರ್ ಮಣೇಲ್ ಮತ್ತು ಯುವಶಕ್ತಿ ಕಾಜಿಲ ಇವರುಗಳ ನೇತೃತ್ವದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ಅಂಗಾಂಗ ದಾನ ನೋಂದಾವಣೆ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ಮಳಲಿ ಶಾಲಾ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ಭರತ್ ಶೆಟ್ಟಿ ಅಂಗಾಂಗ ದಾನದ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಇದೆ. ಅದನ್ನು ನಿವಾರಿಸುವ ಅಗತ್ಯವಿದೆ. ಹಿಂದು ಸಂಘಟನೆಗಳ ಸಮಾಜ ಸೇವಾ ಚಟುವಟಿಕೆಗಳು ಮಾದರಿ ಕಾರ್ಯಗಳಾಗಿದ್ದು, ಸಂಘಟನೆಗಳ ಸಮಾಜ ಸೇವೆಯಿಂದ ದೇಶ ಬೆಳಗಲಿ ಎಂದರು.
ಇನ್ನೊಬ್ಬರ ಬಾಳು ಬೆಳಗಿಸಬಹುದು ಎಜೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಮಾತನಾಡಿ,ಅಂಗಾಂಗ ದಾನದಿಂದ ಇನ್ನೊಬ್ಬರ ಬಾಳನ್ನು ಬೆಳಗಿಸಬಹುದು ಜಿಲ್ಲೆಯಲ್ಲಿ ಅಂಗಾಂಗದಾನದ ಬಗ್ಗೆ ಅರಿವು ಕಡಿಮೆ ಇದೆ, ನಾವು ಅಂಗಾಂಗ ದಾನದಲ್ಲಿ ಹಿಂದೆ ಇದ್ದೇವೆ. ಜಾಗೃತಿ ಮೂಡಿಸುವ ಅಗತ್ಯವಿದೆ ಇದುವರೆಗೆ 25 ದಾನ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಬೆಳ್ಳೂರಿನ ಯುವಕ ಪ್ರಥಮ ಅಂಗಾಂಗ ದಾನ ಮಾಡಿದ್ದು ಇದರಿಂದ ಮೂವರ ಬದುಕು ಬೆಳಗಿದೆ ಎಂದರು.
ಸಮಾಜ ಸೇವಕರಿಗೆ ಸನ್ಮಾನದ ಗೌರವ ಯೋಧ ಉದಯಕುಮಾರ್, ವೀರಣ್ಣ ದೇವಾಡಿಗ, ಪ್ರೇಮನಾಥ್ ಕುಲಾಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ವೇದಿಕೆ ಯಲ್ಲಿ ಶಾಲು ಹೊದಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ಸೇನಾ ಯೋಧ ಉದಯ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಯಮಿ ಚಂದ್ರಹಾಸ್ ನಾರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ 1200ಕ್ಕೂ ಅಧಿಕ ಮಂದಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದರು.
ಡಾ. ಚೇತನ್ ರಾಜ್, ಡಾ. ಹೇಮಂತ್ ಶೆಟ್ಟಿ, ಡಾ.ಪಿ.ಆರ್, ಗೋಪಾಲಕೃಷ್ಣ ಬಜರಂಗದಳದ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮಂಡನ್, ವಿಶ್ವಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ. ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಜಿಲ್ಲಾ ಸಹಕಾರ್ಯದರ್ಶಿ ವಸಂತ ಸುವರ್ಣ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ ಗುರುಪುರ ಪ್ರಖಂಡ ಮಾತ್ರಶಕ್ತಿ ಪ್ರಮುಖರಾದ ವಿಜಯ ರಾಜೇಶ್, ಗುರುಪುರ ಪ್ರಖಂಡ ಬಜರಂಗದಳ ಸಂಚಾಲಕ ರಾಜೇಶ್ ಗಂಜಿಮಠ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಜನಾರ್ಧನ ಗೌಡ, ಬಜರಂಗದಳ ಆಂಜನೇಯ ಶಾಖೆಯ ಸಂಚಾಲಕ ಶ್ರೀನಿಧಿ ವೇದಿಕೆಯಲ್ಲಿದ್ದರು. ಜ್ಯೋತಿ ಪ್ರಾರ್ಥಿಸಿದರು. ವಿಶ್ವ ಹಿಂದೂ ಪರಿಷತ್ ಬಜರಂಗದಳದ ವಿವಿಧ ವಿಭಾಗಗಳ ಪ್ರಮುಖರು ಪದಾಧಿಕಾರಿಗಳು, ಊರಿನ ಗಣ್ಯರು, ಕಾರ್ಯಕರ್ತ ರು ಭಾಗವಹಿಸಿದ್ದರು
