ಮುಂಬಯಿ: ಮುಂಬಯಿನಲ್ಲಿನ ಆಯೋಜಿಸಲಾಗಿದ್ದ ಪೌಷ್ಟಿಕಾಂಶ ಜಾಗೃತಿ ಕಾರ್ಯಕ್ರಮಗಳಲ್ಲಿ ಬೃಹನ್ಮುಂಬಯಿಗೆ ಆಗಮಿಸಿದ್ದ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಮಹಿಳಾ ಮತ್ತುಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರು ಕಳೆದ ಸೋಮವಾರ ಮಾಟುಂಗಾದಲ್ಲಿರುವ ತುಳು ಕನ್ನಡಿಗರ ವಿಶ್ವಪ್ರಿಯ ಉಪಹಾರಗೃಹ ಎ.ರಾಮ ನಾಯಕ್ ಪ್ರಸಿದ್ಧ ಕೆಫೆ ಮೈಸೂರು ಇಲ್ಲಿ ಆಗಮಿಸಿ ದೋಸೆ ಮತ್ತು ವಡೆ ಸವಿದು ಕುಶಲೋಪಚಾರಗೈದರು.
ಇಬ್ಬರೂ ಕೇಂದ್ರ ಸಚಿವರೂ ಗರಿಷ್ಠ ಭದ್ರತಾ ಪಡೆಯೊಂದಿಗೆ ಬಂದಿದ್ದರೂ ಅವರಿಬ್ಬರೂ ಯಾವುದೇ ವಿಐಪಿ ಉಪಚಾರವಿಲ್ಲದೆ ಉಪಹಾರ ಗೃಹದಲ್ಲಿ ಸಾಮಾನ್ಯ ಜನರಂತೆ ಆಸೀನರಾಗಿ ಒಟ್ಟಾಗಿ ಆಹಾರ ಸೇವಿಸಿದ್ದು ಇದನ್ನು ಅಲ್ಲಿನ ಸಹಗ್ರಾಹಕರು, ರೆಸ್ಟೋರೆಂಟ್ನ ಕರ್ಮಚಾರಿಗಳು, ಜನರು ನೋಡಿ ಆಶ್ಚರ್ಯ ಚಕಿತರಾದರು. ಸತೀಶ್ ರಾಮ ನಾಯಕ್ ಅವರು ಸಚಿವರ್ಯರನ್ನು ಬರಮಾಡಿಕೊಂಡು ಉಪಹಾರದ ಬಳಿಕ ನಿರ್ಗಮಿಸುತ್ತಿದ್ದ ಮಂತ್ರಿ ಮಹೋದಯರನ್ನು ಬೀಳ್ಕೊಟ್ಟರು.
ಮಂಗಳೂರು ಕಟೀಲು ಸಮೀಪದ ಎಕ್ಕಾರು ಇಲ್ಲಿನ ಮಂಜುನಾಥ ನಾಯಕ್ ಮತ್ತು ಸರಸ್ವತಿ ಬಾಯಿ ದಂಪತಿ ಸುಪುತ್ರರಾಗಿ ೧೯೦೨ರಲ್ಲಿ ಜನಿಸಿ ಮುಂಬಯಿನಲ್ಲಿ ೧೯೧೨ರಲ್ಲಿ ಉಡುಪಿ ಹೊಟೇಲು ತೆರೆದ ಮೊತ್ತಮೊದಲ ದಕ್ಷಿಣ ಕನ್ನಡಿಗರಾಗಿದ್ದ ಎ.ರಾಮ ನಾಯಕ್ ಅವರ ಉಪಹಾರಗೃಹಗಳು ಇಂದಿಗೂ ಭಾರೀ ಪ್ರಸಿದ್ಧಿಯಲ್ಲಿದ್ದು ದೇಶವಿದೇಶಗಳಲ್ಲಿನ ಧುರೀಣರು, ಹಾಲಿವುಡ್, ಬಾಲಿವುಡ್, ಕ್ರಿಕೆಟ್ ಮತ್ತಿತರ ತಾರೆಯರು, ರಾಷ್ಟ್ರೀಯ ರಾಜಕಾರಣಿಗಳು ಆಗಮಿಸಿ ಇಲ್ಲಿನ ಉಪಹಾರ ಸವಿದು ಸಂತಸ ಪಡುವುದೇ ಇಲ್ಲಿನ ವಿಶೇಷತೆ ಆಗಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಕೇಂದ್ರ ಸಚಿವಾಲಯವು ಧಾರಾವಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರಿಗಾಗಿ ಆಯೋಜಿಸಿರುವ ಪೋಷಣ ಜಾಗೃತ ಅಭಿಯಾನ (ಪೌಷ್ಠಿಕಾಂಶ ಜಾಗೃತಿ ಅಭಿಯಾನ) ಕಾರ್ಯಕ್ರಮಗಲ್ಲಿ ಭಾಗಿಯಾಗಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಐಸಿಡಿಎಸ್ ಆವರಣದಲ್ಲಿ ಅವರು ಡಿಜಿಟಲ್ ಗುಡ್ಡಿಗುಡ್ಡ ಫಲಕಗಳನ್ನು ಉದ್ಘಾಟಿಸಿದರು. ಬಳಿಕ ಅವರ ಮನೆಗಳಿಗೂ ಭೇಟಿ ನೀಡಿದರು.
