ಕೈಕಂಬ: ಗುರುಪುರ ಸಮೀಪದ ಬೆಳ್ಳಿಬೆಟ್ಟು ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಬಳಿ ಬುಧವಾರ ಮುಂಜಾನೆ ಸುಮಾರು ೫ ಗಂಟೆಗೆ ಮೂಡಬಿದ್ರೆಯತ್ತ ಸಾಗುತ್ತಿದ್ದ ಆಲ್ಟೋ ಕಾರು ತಡೆಗಟ್ಟಿದ ಮತ್ತೊಂದು ಕಾರಿನಲ್ಲಿದ್ದ ದುಷ್ಕರ್ಮಿಗಳು ಮೊಬೈಲ್ ಫೋನ್, ಹೆಡ್-ಫೋನ್, ನಗದು ದರೋಡೆಗೈದು ಮಂಗಳೂರಿನತ್ತ ಪರಾರಿಯಾಗಿದ್ದಾರೆ.
ದರೋಡೆಗೊಳಗಾದ ಆಲ್ಟೋ ಕಾರಿನಲ್ಲಿ ಮೂವರಿದ್ದರು. ಮೂಡಬಿದ್ರೆಯ ಸಿವಿಲ್ ಗುತ್ತಿಗೆದಾರರೊಬ್ಬರ ಕೆಲಸಗಾರರಾದ ಇವರು ನೀರುಮಾರ್ಗದಲ್ಲಿ ಮನೆ ನಿರ್ಮಾಣ ಕೆಲಸ ಮುಗಿಸಿ, ಮೂಡಬಿದ್ರೆಯ ಪುತ್ತಿಗೆ ಹಾಗೂ ಕಡಪಲ್ಲದತ್ತ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗುರುಪುರ ದಾಟಿ ಬೆಳ್ಳಿಬೆಟ್ಟು ಬಸ್ ನಿಲ್ದಾಣಕ್ಕೆ ಹತ್ತಿರ, ಎದುರಿನಲ್ಲಿ ನಿಂತಿದ್ದ ಶಿಫ್ಟ್ ಕಾರು ಏಕಾಏಕಿಯಾಗಿ ಆಲ್ಟೋ ಕಾರಿಗೆ ಅಡ್ಡಲಾಗಿ ನಿಂತಿತು. ಸೋಂಟೆ ಹಾಗೂ ತಲ್ವಾರಿನಿಂದ ಬೆದರಿಕೆಯೊಡ್ಡಿ, ಕಾರಿನ ಗ್ಲಾಸ್ ಒಡೆದಿದ್ದಾರೆ. ದರೋಡೆಕೋರರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು.
ಮೂವರ ಕುತ್ತಿಗೆ ಮತ್ತು ಪ್ಯಾಂಟಿನ ಜೇಬು ಹುಡುಕಾಡಿದ್ದಾರೆ. ಅವರಲ್ಲಿ ಒಬ್ಬಾತ ಆಲ್ಟೋ ಕಾರಿನಲ್ಲಿದ್ದ ಯುವಕನ ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ನಗದಿದ್ದ ಪರ್ಸ್ ಕಸಿದು, ನಾಲ್ವರೂ ಮಂಗಳೂರಿನತ್ತ ಪರಾರಿಯಾಗಿದ್ದಾರೆ. ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಜ್ಪೆ ಪೊಲೀಸ್ ನಿರೀಕ್ಷಕ ಕೆ ಆರ್ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಡಿಸಿಪಿ ವಿನಯ್ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ, ದರೋಡೆಗೊಳಗಾದರೊಂದಿಗೆ ಮಾತುಕತೆ ನಡೆಸಿದರು.
