ಮಂಗಳೂರು: ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭ ಸಿಡಿಸಿದ ಪಟಾಕಿಯ ಕಿಡಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಒಳಗೆ ತೂರಿ ಇಬ್ಬರಿಗೆ ಸುಟ್ಟ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಗರದ ಕದ್ರಿ ಕಂಬಳದಲ್ಲಿ ಸಂಭವಿಸಿದೆ.
ನೀಲಾಧರ್ (52) ಮತ್ತು ಅವರ ಪುತ್ರಿ ರಕ್ಷಿತಾ (19) ಸುಟ್ಟ ಗಾಯಗೊಂಡವರು.

ವಿಸರ್ಜನಾ ಮೆರವಣಿಗೆಯು ಕದ್ರಿ ಕಂಬಳ ಜಂಕ್ಷನ್ಗೆ ತಲುಪಿದಾಗ ಪಟಾಕಿ ಬಿಡಲಾಗಿದ್ದು, ಆಗ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮುಂಬದಿಯ ಬಾಗಿಲಿನ ವಿಂಡೊ ಮೂಲಕ ಪಟಾಕಿಯ ಕಿಡಿ ಒಳಗೆ ಹಾರಿದೆ. ಕಾರಿನಲ್ಲಿ ನೀಲಾಧರ್ ಅವರ ಪತ್ನಿ ಮತ್ತು ಪುತ್ರಿ ಕುಳಿತಿದ್ದು, ಪಟಾಕಿಯ ಕಿಡಿ ಅವರ ದೇಹಕ್ಕೆ ತಗುಲಿದೆ. ನೀಲಾಧರ ಅವರ ತೊಡೆ, ರಟ್ಟೆ ಮತ್ತು ದೇಹದ ಇತರ ಭಾಗಗಳಿಗೆ ಹಾಗೂ ರಕ್ಷಿತಾ ಅವರ ಬಲಗೈ, ಕುತ್ತಿಗೆಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೇತರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಚಾಲಕ ಕುಳಿತು ಕೊಳ್ಳುವ ಸೀಟು ಮತ್ತು ಕೆಲವು ಭಾಗಗಳಿಗೂ ಬೆಂಕಿ ತಗುಲಿದ್ದು, ಹಾನಿ ಉಂಟಾಗಿದೆ.
ಯಾವುದೇ ಮೆರವಣಿಗೆಯ ವೇಳೆ ಜನ ಸಂದಣಿ ಇರುವಲ್ಲಿ ಮತ್ತು ವಾಹನಗಳು ಇದ್ದ ಸ್ಥಳದಲ್ಲಿ ಪಟಾಕಿ ಬಿಡ ಬಾರದು ಎಂಬ ನಿಯಮವಿದ್ದು, ಹಾಗಾಗಿ ಶನಿವಾರ ರಾತ್ರಿ ಪಟಾಕಿ ಬಿಟ್ಟ ಮೋಹಿತ್ ಮತ್ತು ಇತರರ ಮೇಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
