ದಿಲ್ಲಿ: ಬಿಜೆಪಿ ತನಗೆ ಸರಕಾರ ರಚಿಸಲು ಆಹ್ವಾನ ನೀಡುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ನೀಡಿದ್ದ ಪತ್ರವನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತುತ ಪಡಿಸುವಂತೆ ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ಖಡಕ್ಆದೇಶ ನೀಡಿದೆ.
ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಪತ್ರವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎಸ್ ಎ ಬೊಬ್ಡೆ ಹಾಗೂ ಅಶೋಕ್ ಭೂಷಣ್ ಅವರು ತಿಳಿಸಿದ್ದಾರೆ.
ಸರಕಾರ ರಚನೆಗೆ ಹಕ್ಕು ಮಂಡಿಸಿ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಎರಡು ಪತ್ರ ಬರೆದಿದ್ದು,ಇದರಲ್ಲಿ ಬಹುಮತಕ್ಕೆ ಬೇಕಾದ 112 ಶಾಸಕರು ಇದ್ದಾರೆ ಎಂದು ಸೂಚಿಸಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟ ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ 118 ಮಂದಿ ಶಾಸಕರ ಸಹಿ ಹಾಕಿಸಿವೆ. ಇದು ಬಹುಮತಕ್ಕಿಂತ (112) ಹೆಚ್ಚು ಸ್ಥಾನಗಳು. ಇಷ್ಟು ಸರಳ ಲೆಕ್ಕಾಚಾರ ಎದುರಲ್ಲಿ ಇರುವಾಗ ರಾಜ್ಯಪಾಲರು ಹೇಗೆ ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಆಹ್ವಾನ ನೀಡಿದ್ದಾರೆಂಬುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ಈ ಬಗ್ಗೆ ಸುಪ್ರೀಂ ಶುಕ್ರವಾರ ಬೆಳಗ್ಗೆ 10. 30ಕ್ಕೆ ಸೂಕ್ತವಾಗಿ ಮತ್ತೆ ವಿಚಾರಣೆ ವಿಚಾರಣೆ ನಡೆಸಲಿದೆ. ಅಲ್ಲದೆ, ಬಿಜೆಪಿ ರಾಜ್ಯಪಾಲರಿಗೆ ಬರೆದ ಪತ್ರಗಳನ್ನು ಹಾಜರುಪಡಿಸುವಂತೆ ಪೀಠ ತಿಳಿಸಿದೆ.
ವಿಚಾರಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕೇ, ಬೇಡವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ.

