ಮಂಗಳೂರು: ದೀಪಕ್ ಕೊಲೆಗೆ ಪ್ರತೀಕಾರವಾಗಿ ನಡೆದ ಬಶೀರ್ ಕೊಲೆಯನ್ನು ಬಹಿರಂಗವಾಗಿ ಸಮರ್ಥಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವರನ್ನು ಕೋಮುಗಲಭೆಗೆ ಪ್ರಚೋದನೆಯಡಿ ಮೊಕದ್ದಮೆ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇಂತಹ ಮಾತುಗಳಿಂದ ಪ್ರಚೋದಿತರಾದ ಯುವಕರು ಅಮಾಯಕರ ಕೊಲೆಗಳನ್ನು ನಡೆಸುತ್ತಾರೆ. ಕ್ರಿಮಿನಲ್ ಗಳಾಗಿ ಬದಲಾಗುತ್ತಾರೆ. ಇದರ ಪರಿಣಾಮವನ್ನು ಇಡೀ ಜಿಲ್ಲೆಯ ಜನ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಹಿಂಸಾಚಾರ, ಮತೀಯ ದ್ವೇಷದ ಹಿನ್ನೆಲೆಯ ಪ್ರತೀಕಾರದ ಕೊಲೆಗಳ ಹಿಂದೆ ಕೋಮು ಸಂಘಟನೆಗಳ ವ್ಯವಸ್ಥಿತ ಕಾರ್ಯಾಚರಣೆಗಳಿವೆ ಎಂದು ಅವರು, ಶೇಣವರಿಗೆ ಒದಗಿಸಿರುವ ಭದ್ರತೆ ವಾಪಾಸ್ ಪಡೆದು, ಕೋಮುಗಲಭೆಗೆ ಪಿತೂರಿ, ಕೊಲೆಗೆ ಪ್ರಚೋದನೆಯ ಸೆಕ್ಷನ್ ಗಳ ಅಡಿ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

