ಬಂಟ್ವಾಳ :ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವಂತೆ ಯುವಜನತೆಗೆ ಸಾಧನಾ ಮನೋಭಾವ ಮತ್ತು ಮಾನಸಿಕ ಸ್ಥೈರ್ಯ ಮೂಡಿಸುವ ಕೆಲಸವೂ ನಡೆಯಬೇಕು. ಆ ಮೂಲಕ ಅವರಲ್ಲಿ ಶಾಂತಿ, ಸಹನೆ ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ.
ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಪದವಿ ವಿಭಾಗ ವತಿಯಿಂದ ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಳ್ವಾಸ್ ರೀಚ್-2018’ ‘ಯುವಜನತೆ ಮತ್ತು ಮಾನಸಿಕ ಸ್ವಾಸ್ಥ್ಯ’ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಪ್ರಸಕ್ತ ಸಮಾಜದಲ್ಲಿ ಸ್ವಾರ್ಥ ಹೆಚ್ಚಳಗೊಂಡು ಸ್ವಸಾಮಥ್ರ್ಯ ಮರೆಯಾಗುತ್ತಿದೆ. ಇದಕ್ಕೆ ಬದಲಾಗಿ ಇತರರ ಅನಗತ್ಯ ವಿಚಾರ ಮತ್ತು ನಿಂದನೆ ಮತ್ತಿತರ ಕಾರಣಕ್ಕಾಗಿ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ ಎಂದರು.ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಂಗೇರ, ಪ್ರಾಧ್ಯಾಪಕಿ ಡಾ.ಮಧುಮಾಲ ಕೆ., ಪ್ರಮುಖರಾದ ಸುನೀತಾ ಪೂಜಾರಿ ಮುಂಬೈ, ವಿಲಿಯಂ ಡೆಡ್ರೈ ಬೆಂಗಳೂರು ಮತ್ತಿತರರು ಇದ್ದರು. ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು.
ಪ್ರಾಧ್ಯಾಪಕಿಯರಾದ ಪವಿತ್ರಾ ಪ್ರಸಾದ್ ಸ್ವಾಗತಿಸಿ, ಸ್ವಪ್ನಾ ವಂದಿಸಿದರು. ವಿದ್ಯಾರ್ಥಿ ಸಕೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ‘ಮಾನಸಿಕ ಸ್ವಾಸ್ಥ್ಯ’ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಗೃತ ಗೀತೆ, ಮೂಕಾಭಿನಯ, ಬೀದಿ ನಾಟಕ ಸ್ಪರ್ಧೆ ನಡೆಯಿತು. ಇದೇ ವೇಳೆ ‘ಮಾನಸಿಕ ಸ್ವಾಸ್ಥ್ಯ ಏಕೆ ಅಗತ್ಯ’…? ವಿಷಯಕ್ಕೆ ಸಂಬಂಧಿಸಿದಂತೆ ಸುನೀತಾ ಪೂಜಾರಿ ಮುಂಬೈ ಮತ್ತು ‘ಚಟಗಳು ಮತ್ತು ಮಾನಸಿಕ ಸ್ವಾಸ್ಥ್ಯ’ ವಿಷಯಕ್ಕೆ ಸಂಬಂಧಿಸಿದಂತೆ ಮನೋತಜ್ಞ ಡಾ.ಪಿ.ವಿ.ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
