ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಸಮೀಪದಲ್ಲಿರುವ ತಾಲ್ಲೂಕು ಪಂಚಾಯಿತಿ ಹಳೆ ಕಟ್ಟಡ ತೆರವುಗೊಳಿಸಿ, ಬಸ್ ತಂಗುದಾಣ ನಿರ್ಮಿಸಲು ಇಲ್ಲಿನ ತಾಲ್ಲೂಕು ಪಂಚಾಯಿತಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಈ ಬಗ್ಗೆ ಚರ್ಚೆ ನಡೆಸಿದ ಬಳಿಕ ನಿರ್ಣಯ ಕೈಗೊಂಡರು.
ಈಗಾಗಲೇ ಹಳೆ ಕಟ್ಟಡ ತೆರವುಗೊಳಿಸುವ ಬಗ್ಗೆ ತಾತ್ಕಾಲಿಕ ತಡೆಯಾಜ್ಞೆ ತರಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ನ್ಯಾಯಾಲಯಕ್ಕೆ ಅಧಿಕಾರ ಇಲ್ಲದಿದ್ದರೂ ಇದೀಗ ತಡೆಯಾಜ್ಞೆ ತೆರವುಗೊಂಡಿದೆ ಎಂದರು. ಇದರಿಂದಾಗಿ ಹಳೆ ಕಟ್ಟಡ ತೆರವುಗೊಳಿಸಿ, ಸುಸಜ್ಜಿತ ಬಸ್ ತಂಗುದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಿದಾಗ ತಾಲ್ಲೂಕು ಪಂಚಾಯಿತಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ಬಿಜೆಪಿ ಸದಸ್ಯ ರಮೇಶ ಕುಡ್ಮೇರು ಮಾತನಾಡಿ, ಹಳೆ ಕಟ್ಟಡ ತೆರವುಗೊಳಿಸಿ ಬಸ್ ತಂಗುದಾಣ ನಿರ್ಮಿಸಲು ನಮ್ಮ ಆಕ್ಷೇಪ ಇಲ್ಲ. ಆದರೆ ಅಲ್ಲೇ ಇರುವ ಹೊಸ ವಾಣಿಜ್ಯ ಸಂಕೀರ್ಣ ತೆರವುಗೊಳಿಸಿದರೆ ಮತ್ತಷ್ಟು ನಷ್ಟ ಸಂಭವಿಸಲಿದೆ ಎಂದರು. ಇದಕ್ಕೆ ಸದಸ್ಯ ಯಶವಂತ ಪೊಳಲಿ ಧ್ವನಿಗೂಡಿಸಿ ಮಾತನಾಡಿ, ಹಳೆ ಕಟ್ಟಡದ ಬಹುತೇಕ ಜಾಗವು ಸರ್ವಿಸ್ ರಸ್ತೆಗೆ ಹೋಗುತ್ತದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಸದಸ್ಯ ಸಂಜೀವ ಪೂಜಾರಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಮಿನಿ ವಿಧಾನಸೌಧ ಆವರಣದೊಳಗೆ ಜನಪ್ರತಿನಿಧಿಗಳು ವಾಹನ ನಿಲುಗಡೆಗೊಳಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮತ್ತಿತರರು ಇದ್ದರು.
