ಬಜಪೆ : ಬಜಪೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಜಪೆ ಮಾರುಕಟ್ಟೆ ಸುಂಕ ವಸೂಲಿ, ಅನಧಿಕೃತ ಬಾರ್ ಮತ್ತು ತ್ಯಾಜ್ಯ ವಿಲೇ ವಿಷಯದಲ್ಲಿ ಸದಸ್ಯರು ಮತ್ತು ಪಿಡಿಒ, ಅಧ್ಯಕ್ಷರ ಮಧ್ಯೆ ತೀವ್ರ ಚರ್ಚೆ ನಡೆಯಿತು.ಅಧ್ಯಕ್ಷೆ ರೋಝಿ ಮಥಾಯಿಸ್ ಅಧ್ಯಕ್ಷತೆಯಲ್ಲಿ ಅ. 25ರಂದು ಸಾಮಾನ್ಯ ಸಭೆ ನಡೆಯಿತು. ಮೂರು ವರ್ಷಗಳ ಹಿಂದೆ ಪಂಚಾಯತ್ ನಿರ್ಣಯದಂತೆ ಮಾರುಕಟ್ಟೆ ಸುಂಕ ವಸೂಲಿ ಕೆಲಸವನ್ನು ಮೊಹಮ್ಮದ್ ನಿಸಾರ್ ಎಂಬವರಿಗೆ ನೀಡಲಾಗಿತ್ತು. ಈ ನಿರ್ಣಯ ಸರಿ ಇಲ್ಲ, ಪ್ರತಿ ವರ್ಷ ಮಾರುಕಟ್ಟೆ ಏಲಂ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ವಂದನಾ ಪಿಂಟೋ ಎಂಬವರು ರಾಜ್ಯ ಹೈಕೋರ್ಟಿಗೆ ಮನವಿ ಮಾಡಿದ್ದರು.
ಮನವಿ ಮೇರೆಗೆ ಪಂಚಾಯತ್ ನಿರ್ಣಯಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಬಳಿಕ ನಿಸಾರ್ ಹೈಕೋರ್ಟಿಗೆ ಅಪೀಲ್ ಮಾಡಿದ್ದು ತಾಪಂ ಕಾರ್ಯ ನಿರ್ವಹಾಣಾಧಿಕಾರಿ(ಇಒ) ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರ್ಟ್ ಆದೇಶಿಸಿತ್ತು. ಈ ಆದೇಶದಂತೆ ಇಒ, ವಂದನಾ ಪಿಂಟೋ ಮತ್ತು ಮೊಹಮ್ಮದ್ ನಿಸಾರ್ ಕರೆಸಿ ಚರ್ಚೆ ನಡೆಸಿದ ಬಳಿಕ, 2018ರ ಮಾರ್ಚಿನವರೆಗೆ ನಿಸಾರ್ ಅವರೇ ಮಾರುಕಟ್ಟೆ ಕರ ವಸೂಲಿ ಮಾಡುವಂತೆ ತೀರ್ಮಾನಿಸಿ, ಸೂಚನೆ ನೀಡಿದರು.
ಕೋರ್ಟ್ ಆದೇಶಕ್ಕೆ ಬದ್ಧನಾಗಿದ್ದರೂ, ಇದೊಂದು ಕಾನೂನು ರೀತ್ಯಾ ಜಟಿಲ ವಿಷಯವಾದ್ದರಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಪಂಚಾಯತ್ ಪಿಡಿಒ ಅಥವಾ ಅಧ್ಯಕ್ಷರು ಸದಸ್ಯರ ಸಭೆ ಕರೆದು ಚರ್ಚಿಸಬಹುದಿತ್ತು ಎಂದು ಸದಸ್ಯ ಲೋಕೇಶ್ ಪೂಜಾರಿ ಹೇಳಿದರು.
ಇದಕ್ಕೆ ಉತ್ತರಿಸಿದ ಪಿಡಿಒ ಎಸ್ ಚೌಟ, “ಸಾಮಾನ್ಯ ಸಭೆ ಕರೆಯುವ ಅಧಿಕಾರ ಪಿಡಿಒಗೆ ಇಲ್ಲ. ಈ ವಿಷಯ ಅಧ್ಯಕ್ಷರ ಗಮನಕ್ಕೆ ತಂದಿದ್ದೆ ಮತ್ತು ನಿರ್ದಿಷ್ಟ ದಿನದೊಳಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂಬುದು ಗೊತ್ತಿತ್ತು” ಎಂದರು.
ಮಾರುಕಟ್ಟೆ ಕರ ವಸೂಲಿ ವಿಷಯದಲ್ಲಿ ಸದಸ್ಯರಾದ ಸಾಹುಲ್ ಮತ್ತು ಸುರೇಂದ್ರ ಪೆರ್ಗಡೆ ಕೆಲವಾರು ಪ್ರಶ್ನೆ, ಸಲಹೆ ಮುಂದಿಟ್ಟರು. ಬಳಿಕ ಬೆಳೆ ಸಮೀಕ್ಷೆ, ಬೆಳೆಗೆ ಸಬ್ಸಿಡಿ ವಿಷಯದಲ್ಲಿ ಪಿಡಿಒ ಮಾಹಿತಿ ನೀಡಿದರು. ಇದೇ ವೇಳೆ ಸಾಹುಲ್ ಮತ್ತು ಮಹಿಳಾ ಸದಸ್ಯೆಯೊಬ್ಬರು ಬಜ್ಪೆ ಕೋಚಾರುವಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಲೇಬರ್ ಶೆಡ್ ವಿಷಯ ಪ್ರಸ್ತಾವಿಸಿದರು. ಈ ಬಗ್ಗೆ ಪಂಚಾಯತ್ ಪರಿಶೀಲಿಸಲಿದೆ ಎಂಬ ಭರವಸೆ ವ್ಯಕ್ತವಾಯಿತು.
ಬಳಿಕ ಬಜಪೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತಹ ವೈನ್ ಶಾಪೊಂದರ ಬಗ್ಗೆ ಸಾಹುಲ್ ಪ್ರಸ್ತಾವಿಸುತ್ತ, “ನಾವು ಇಂತಹ ಯಾವುದೇ ಬಾರುಗಳ ಪರವಾಗಿಲ್ಲ. ಕಾನೂನು ಹೋರಾಟವೇನಾದರೂ ಎದುರಾದರೆ, ದೂರಿನಲ್ಲಿ ನನ್ನ ಹೆಸರು ಸೇರಿಸಿಕೊಳ್ಳಿ” ಎಂದರು.
ಕಲಾಪ ವೀಡಿಯೋ
ರಾಜ್ಯದ ಎಲ್ಲ ಗ್ರಾಪಂಗಳ ಕಲಾಪದ ಆಡಿಯೋ, ವೀಡಿಯೋ ಚಿತ್ರೀಕರಿಸಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಅದರಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಇಂದಿನ(ಅ.25) ಬಜಪೆ ಗ್ರಾಪಂ ಸಾಮಾನ್ಯ ಸಭೆ ಕಲಾಪದ ವೀಡಿಯೋ ಚಿತ್ರೀಕರಣ ನಡೆಯಿತು. ಆರಂಭದಲ್ಲಿ ಉಪಾಧ್ಯಕ್ಷ ಮೊಹಮ್ಮದ್ ಶರೀಫ್, ಪಿಡಿಒ ಎಸ್ ಚೌಟ ಹಾಗೂ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷೆ ರೋಝಿ ಮಥಾಯಿಸ್ ಈ ವ್ಯವಸ್ಥೆ ಉದ್ಘಾಟಿಸಿದರು.
