ಕೈಕಂಬ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಬೇಸಾಯ ಪ್ರಮಾಣ ಕಡಿಮೆಯಾಗುತ್ತಿದೆ. ಹಿಂದೆ ಗುರುಪುರ ಹಳ್ಳಿ ಪ್ರದೇಶದಲ್ಲಿ ನೂರಾರು ಎಕ್ರೆ ಗದ್ದೆಯಲ್ಲಿ ಎರಡು, ಕೆಲವು ಬಾರಿ ಮೂರು ಕಂತಿನ ಭತ್ತದ ಸಾಗುವಳಿಯಾಗುತ್ತಿತ್ತು. ವರ್ಷಗಳು ಉರುಳುತ್ತಲೇ ಜಿಲ್ಲೆಯ ಇತರೆಡೆಯಂತೆ ಇಲ್ಲೂ ಬಹುತೇಕ ಭತ್ತದ ಜಮೀನು ರಿಯಲ್ ಎಸ್ಟೇಟ್ ಪಾಲಾಗಿದೆ. ಪರಿಣಾಮ, ಈಗ ಇಲ್ಲಿ ಎಲ್ಲೆಲ್ಲೂ ಹಸಿರಿಲ್ಲದ, ಗಿಡಗಂಟಿ-ಪೊದೆಗಳು ಬೆಳೆದಿರುವ ಬಂಜರು ಭೂಮಿ ಕಾಣಬಹುದು.
ಅದೇನೇ ಇದ್ದರೂ, ಇಲ್ಲಿ ಬೆರಳೆಣಿಕೆ ರೈತರು ಒಂದಷ್ಟು ಭತ್ತದ ಬೇಸಾಯ ಮಾಡುತ್ತಿದ್ದಾರೆ. ಅದೂ ಕೂಡ ಒಂದೇ ಕಂತಿನ ಬೇಸಾಯ. ಬೆಳೆದ ಭತ್ತ ಕಟಾವಿಗೆ ಬಂದರೂ ಕೊಯ್ಯುವ ಕೂಲಿಗಳಿಲ್ಲದೆ ತಾಪತ್ರಯ ಹೇಳತೀರದು. ಬೇಸಾಯ ಸಾಕೋ ಸಾಕಾಯಿತು, ಇನ್ನು ಸಾಗುವಳಿಯ ಉಸಾಬರಿಯೇ ಬೇಡ ಎನ್ನುತ್ತಾರೆ ಈಗ ಒಂದಷ್ಟು ಕೃಷಿ ಮಾಡುತ್ತಿರುವ ಈ ರೈತರು. ಕೂಲಿಯಾಳುಗಳ ದುಬಾರಿಯಾಗಿರುವ ಈ ದಿನಗಳಲ್ಲಿ ತೀರಾ ಹಳ್ಳಿಯ ಅಳಿದುಳಿದ ಕೃಷಿಕರೂ ನೇಜಿ ನೆಡುವ ಮತ್ತು ಭತ್ತದ ಕಟಾವು ಯಂತ್ರ ಬಳಸಿಕೊಳ್ಳಲು ಆಸಕ್ತರಾಗಿದ್ದಾರೆ. ಇದೇ ಕಾರಣಕ್ಕಾಗಿ ಕಳೆದ ಬಾರಿ ನಮ್ಮೂರಿಗೆ ನೇಜಿ ನೆಡುವ ಯಂತ್ರ ಬಂದಿದ್ದರೆ, ಈ ಬಾರಿ ಭತ್ತದ ಕಟಾವು ಯಂತ್ರ ಬಂತು.

“ನಾನು ಈ ವರ್ಷ ಬೆಳೆದಿರುವ ಮೂರು ಎಕ್ರೆ ಭತ್ತದ ಸಾಗುವಳಿಯ ಕೊಯ್ಲಿಗೆ ದೂರದ ಊರಿನಿಂದ ಮಹಿಳೆಯರನ್ನು ಕರೆದರೂ ಅವರು ಗುರುಪುರಕ್ಕೆ ಬರಲು ನಿರಾಕರಿಸಿದರು ಮತ್ತು ಹೆಚ್ಚು ಮಜೂರಿ ಆಗ್ರಹಿಸಿದರು. ಅವರು ಕೇಳಿದಷ್ಟು ನೀಡಿದರೆ ನಾನು ಬೆಳೆದ ಭತ್ತದ ಬೇಸಾಯದ ಒಟ್ಟು ಕರ್ಚಿಗಿಂತ ಒಂದು ಪಟ್ಟು ಹೆಚ್ಚು ಮೊತ್ತ ವ್ಯಯಿಸಬೇಕಾಗುತ್ತದೆ ಎಂದು ನಾನು ಭತ್ತದ ಕಟಾವಿನ ಮೆಶಿನ್ ತರಿಸಿದೆ. ಇದು ಕೂಲಿಯಾಳುಗಳ ದಿನ ಮಜೂರಿಗಿಂತ ಕಡಿಮೆಯಾಗಿದೆ. ಇದರಲ್ಲಿ ಸಮಯ ಮತ್ತು ಹಣ ಉಳಿತಾಯವಾಗುತ್ತದೆ” ಎಂದು ತನ್ನ ಮೂರು ಎಕ್ರೆ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ಮಾಡಿಸಿದ ಗುರುಪುರದ ಕೃಷಿಕ ಸತೀಶ್ ಕಾವ ಅವರ ಅನಿಸಿಕೆ.

“ಕೂಲಿಯಾಳುಗಳು ಕೇಳಿದಷ್ಟು ನೀಡುತ್ತ ಹೋದರೆ, ಬೇಸಾಯ ಮಾಡಿದ ನಾವು ನಷ್ಟದಲ್ಲಿ ಮುಳುಗಬೇಕಾಗುತ್ತದೆ. ಕೂಲಿಯಾಳುಗಳು ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 4.30ಗೆ ಮರಳುತ್ತಾರೆ. ಯಂತ್ರದ ಮೂಲಕ ಹಾಗಿಲ್ಲ, ಗಂಟೆ ಪ್ರಕಾರ ಹಣ ನೀಡಿದರಾಯಿತು. ಯಂತ್ರ ಬಳಕೆ ಎಲ್ಲ ರೀತಿಯಲ್ಲೂ ಕೃಷಿಕಗೆ ಲಾಭದಾಯಕ. ನಾನು ಕೂಡಾ ಈ ಬಾರಿ ಇದೇ ಮೆಶಿನ್ ಮೂಲಕ ಭತ್ತ ಕಟಾವು ಮಾಡಿಸುತ್ತಿದ್ದೇನೆ” ಎಂದು ಗುರುಪುರ ಕುಕ್ಕದಕಟ್ಟೆಯ ಇನ್ನೊಬ್ಬ ಕೃಷಿಕ ಭಂಡಾರಮನೆ ಶ್ರೀಧರ ಪೂಜಾರಿ ತಿಳಿಸಿದರು.
* ಹಿಂದೆ-ಈಗ ಎಷ್ಟೆಷ್ಟು ? ಕೆಲಸದಾಳು, ಮಜೂರಿ ?
ಒಂದು ವರ್ಷದ ಹಿಂದೆ 80 ಸೆನ್ಸ್ ಭತ್ತದ ಕಟಾವಿಗೆ ಒಬ್ಬ ಕೂಲಿಯಾಳುವಿಗೆ ಸರಿಸುಮಾರು ತಲಾ 400 ರೂ ನಿಗದಿಯಾಗಿತ್ತು. ಒಟ್ಟು 10 ಮಂದಿ ಕಾರ್ಮಿಕರು 80 ಸೆನ್ಸ್ ಗದ್ದೆಯ ಕಟಾವನ್ನು ಎರಡು ದಿನದಲ್ಲಿ ಮುಗಿಸುತ್ತಿದ್ದರು. ಅಂದರೆ, 80 ಅಥವಾ ಒಂದು ಎಕ್ರೆ ಭತ್ತದ ಕಟಾವು ಮಾಡುವ 20 ಮಂದಿಗೆ ಸುಮಾರು 6,400 ರೂ ಮಜೂರಿ ನೀಡಬೇಕಾಗುತ್ತಿತ್ತು. ಉಳಿದ ಕರ್ಚು ಪ್ರತ್ಯೇಕ. ಆದರೆ ಈ ಯಂತ್ರ ಒಂದು ಗಂಟೆಗೆ ಒಂದು ಎಕ್ರೆ ಭತ್ತ ಕಟಾವು ಮಾಡುತ್ತದೆ. ಗಂಟೆಗೆ ಇದರ ಮೊತ್ತ 2,000-2,100 ರೂ ಆಗಿದ್ದು, ಇದರಲ್ಲಿ ಯಂತ್ರ ಸಾಗಣೆ ಮೊತ್ತವೂ ಒಳಗೊಂಡಿದೆ. ಹಾಗಾಗಿ ಕೂಲಿಯಾಳುಗಳ ಬಳಸಿ ಭತ್ತದ ಕಟಾವು ಮಾಡುವುದಕ್ಕಿಂತ ಯಂತ್ರ ಬಳಕೆ ಕಟಾವು ಎಷ್ಟೇ ಪಾಲು ಲಾಭದಾಯಕ.
`* ಕ್ಲಾಸ್’ ಕಟಾವು ಯಂತ್ರ :
“ಕೃಷಿ ಇಲಾಖೆ 23 ಲಕ್ಷಕ್ಕೆ ಖರೀದಿಸಿದ ಈ `ಕ್ಲಾಸ್’ ಕಟಾವು ಯಂತ್ರ ಎಡಪದವಿನಲ್ಲಿದೆ. ಇದರಿಂದ ಸಾಧಾರಣ ಕೆಸರು ಗದ್ದೆಯಲ್ಲೂ ಕಟಾವು ಸಾಧ್ಯ. ಇದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಂಟಿ ನಿರ್ವಹಣೆಯಲ್ಲಿದ್ದು, ಒಂದು ಸೀಸನಿನಲ್ಲಿ 1,000 ಗಂಟೆಗಳಷ್ಟು ಕಟಾವು ಮಾಡಬೇಕಿದೆ. ನಮಗಾಗಿ ಕಾಯದ ಇಲ್ಲಿನ ಕೆಲವು ರೈತರು ಖಾಸಗಿಯಾಗಿ ತಮಿಳುನಾಡು ಮತ್ತು ಇತರ ಕಡೆಗಳಿಂದ ಯಂತ್ರ ತಂದು ಭತ್ತದ ಕಟಾವು ಮಾಡುವುದರಿಂದ ಇಲಾಖೆಯ ಯಂತ್ರದ ಬಳಕೆ ಕಡಿಮೆಯಾಗಿದೆ. ಈ ಬಾರಿ ಇದುವರೆಗೆ ನಾವು 120 ಗಂಟೆಗಳ ಕಟಾವು ಮಾಡಿದ್ದೇವೆ. ಖಾಸಗಿ ಯಂತ್ರದಿಂದ ಭತ್ತದ ಕಟಾವಿಗೆ ಹೆಚ್ಚು ಹಣ ತೆರಬೇಕಾಗುತ್ತದೆ” ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಬಂಧಕ ಕೇಶವ ತಿಳಿಸಿದರು.
ನೀಟಾಗಿ ಕಟಾವು ಮಾಡುವ ಈ ಯಂತ್ರದಲ್ಲಿ ಏಳು ಕ್ವಿಂಟಾಲ್ ಭತ್ತ ಶೇಖರಣೆಯಾದ ಬಳಿಕ, ಒಂದೆಡೆ ಹೊರಗೆ ಹಾಕ ಬೇಕಾಗುತ್ತದೆ. ಈ ಭತ್ತದಲ್ಲಿ ಯಾವುದೇ ಕಸಕಡ್ಡಿ(ದಡ್ಡ್), ಹುಲ್ಲು ಇರುವುದಿಲ್ಲ. ಗದ್ದೆಯಿಂದಲೇ ವಾಹನಗಳಲ್ಲಿ ಭತ್ತ ಸಾಗಿಸಲಾಗುತ್ತದೆ. ಯಂತ್ರದ ಮೂಲಕ ಭತ್ತದ ಕಟಾವು ಮಾಡಿದರೆ, ಗದ್ದೆಯಲ್ಲಿ ಭತ್ತ ಕಟಾವು ಮಾಡುವ ಕೂಲಿಗಳೇ ಬೇಡ, ಸಮಯ, ಹಣ ಉಳಿತಾಯವಾಗಲಿದೆ. ಮನೆಗೆ ಭತ್ತ ಹೊತ್ತು ತಂದು, ಬಡಿದು ಭತ್ತ ಪ್ರತ್ಯೇಕಿಸುವ ತಾಪತ್ರಯವಿಲ್ಲ. ಭತ್ತದ ಎಲ್ಲ ಕೆಲವೂ ಕ್ಷಣಾರ್ಧದಲ್ಲಿ ಯಂತ್ರದ ಮೂಲಕ ಆಗುತ್ತದೆ.
