ಮುಂಬಯಿ: ಭಾರತ್ ಬ್ಯಾಂಕ್‍ನ ನಿವೃತ್ತ ಉಪ ಪ್ರದಾನ ಪ್ರಬಂಧಕ ರಘು ಪೂಜಾರಿ ಅವರ ಧರ್ಮಪತ್ನಿ, ಪಂಜಾಬ್ ಎಂಡ್ ಸಿಂಧ್ ಬ್ಯಾಂಕ್‍ನ ಹಿರಿಯ ಉದ್ಯೋಗಿ ಶೋಭಾ ರಘು ಪೂಜಾರಿ (55.) ಇಂದಿಲ್ಲಿ ಶುಕ್ರವಾರ ಉಪನಗರ ಜೋಗೇಶ್ವರಿ ರೈಲ್ವೇ ನಿಲ್ದಾಣದಲ್ಲಿ ಅಪಘಾತಕ್ಕೆ ವಿಧಿವಶರಾದರು.ಎಂದಿನಂತೆ ಬೆಳಿಗ್ಗೆ 8.00 ಗಂಟೆ ವೇಳೆಗೆ ಉದ್ಯೋಗ ನಿಮಿತ್ತ ಹೊರಟ ಶೋಭಾ ಉಪನಗರ ಜೋಗೇಶ್ವರಿ ರೈಲ್ವೇ ನಿಲ್ದಾಣದ ಹಳಿ ದಾಟುತ್ತಿದ್ದಂತೆಯೇ ರಭಸವಾಗಿ ಬಂದ ಲೋಕಲ್ ರೈಲಿನಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Shobha Raghu Poojary

ವಿಷಯ ತಿಳಿದ ಸಹೋದ್ಯೋಗಿಗಳು ತಕ್ಷಣವೇ ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದು, ತತ್‍ಕ್ಷಣ ರಘು ಪೂಜಾರಿ ಅವರನ್ನೊಳಗೊಂಡು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬ್ಯಾಂಕ್‍ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್.ಕರ್ಕೇರಾ, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್. ಕಿರೋಡಿಯನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಹರೀಶ್ ಹೆಜ್ಮಾಡಿ, ಉದ್ಯಮಿ ವಿ.ಕೆ ಶೆಟ್ಟಿ ಕಲೀನಾ, ರೋಹಿತ್ ಬಂಗೇರಾ ಹೆಜ್ಮಾಡಿ ಮತ್ತಿತರರು ಸ್ಥಳಕ್ಕೆ ಧಾವಿಸಿದ್ದರು.

ರೈಲ್ವೇ ಪೊಲೀಸರ ಕ್ರಮಾನುಸಾರ ಮೃತದೇಹದ ಮಹಾಜರು ನಡೆಸಿದರು. ಬಳಿಕ ಅಂಧೇರಿ ಪಶ್ಚಿಮದ ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತಾರ ಪರೀಕ್ಷೆ ನಡೆಸಿ ಸಂಜೆ ವೇಳೆಗೆ ಪಾರ್ಥೀವ ಶರೀರವನ್ನು ಸ್ವನಿವಾಸಕ್ಕೆ ತರಲಾಯಿತು.

ಬೃಹನ್ಮುಂಬಯಿಯ ಮುನ್ಸಿಪಾಲಿಟಿ ಕನ್ನಡ ಶಾಲೆಯ ಹೆಸರಾಂತ ಮುಖ್ಯೋಪಾಧ್ಯಾಯಿನಿ ಭವಾನಿ ಟೀಚರ್ ಪ್ರಸಿದ್ಧಿಯ ಸುಪುತ್ರಿ ಆಗಿದ್ದ ಶೋಭಾ ಪೂಜಾರಿ ಮೂಲತಃ ಉಡುಪಿ ವಾದಿರಾಜ ರಸ್ತೆ (ಶ್ರೀಕೃಷ್ಣ ಮಠದ ಸನಿಹದ) ಇಲ್ಲಿನ ನಿವಾಸಿ ಆಗಿದ್ದು ಅನೇಕ ವರ್ಷಗಳಿಂದ ಮುಂಬಯಿ ಉಪನಗರದ ಅಂಧೇರಿ ಪಶ್ಚಿಮದ ರಮೇಶ್ ನಗರದ ಜೈ ಭವಾನಿ ಮಾತಾ ರಸ್ತೆಯಲ್ಲಿನ ಸಾನಿ ಪಾರ್ಕ್ ನಿವಾಸಿ ಆಗಿದ್ದರು. ಮೃತರ ಏಕೈಕ ಪುತ್ರಿ ವಿದೇಶದಲ್ಲಿದ್ದು ಆಕೆ ಆಗಮಿಸಿದ ಬಳಿಕ ರಾತ್ರಿ ವೇಳೆಗೆ ಅಂತ್ಯಕ್ರಿಯೆಯನ್ನು ಅಂಭೋಲಿ ಅಲ್ಲಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ಶೋಭಾ ರಘು ಪೂಜಾರಿ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ನಿರ್ದೇಶಕ ಮಂಡಳಿ, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಎಲ್.ವಿ ಅವಿೂನ್, ಎನ್.ಟಿ ಪೂಜಾರಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *