ಇoದು ಕನ್ಯಾ ಮರಿಯಮ್ಮನವರ ಜನ್ಮದಿನ. ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು ತಾಯ್ನಾಡಿನ ಸಂಸ್ಕೃತಿಯನ್ನು ಮೆರೆದು ಸೆ.8ರಂದು `ಪ್ರಕೃತಿ ಮಾತೆ’ಯ (ಯೇಸು ಕ್ರಿಸ್ತರ ಜನನಿದಾತೆ ಮಾತೆ ಮರಿಯಮ್ಮ) ಹುಟ್ಟುಹಬ್ಬ ಸಂಭ್ರಮಿಸುವುದು ಅನಾದಿ ಕಾಲದ ಸಂಪ್ರದಾಯವೂ ಹೌದು. ಕೃಷಿ ಪ್ರಧಾನ ಈ ಆಚರಣೆಯನ್ನು ತುಳು ಭಾಷಿಗರು ಕುರಲ್ ಪರ್ಬ ಎಂದರೆ ಕನ್ನಡಿಗರು ತೆನೆಹಬ್ಬ ಎಂದಾಗಿಸಿ ಆಚರಿಸುತ್ತಾರೆ. ವಿಶ್ವದ ಎಲ್ಲಾ ಕ್ರೈಸ್ತ ಬಾಂಧವರು ನವೋಲ್ಲಾಸ ಹೊಂದುವ ಪವಿತ್ರ ಹಬ್ಬ ಎಂದಾದರೆ ಪ್ರಪಂಚದ ಎಲ್ಲ ಕ್ರೈಸ್ತರಿಕ್ಕಿಂತ ಭಾರತದಲ್ಲಿ ಈ ದೇಶದ ಸನಾತನ ಪಾರಂಪರಿಕ ಶ್ರದ್ಧೆಗೆ ಅನುಗುಣವಾಗಿ ಆಚರಿಸಲ್ಪಡುತ್ತಿದೆ. ಕರುನಾಡುನಲ್ಲಿ ಹೊಸತು ಉಣ್ಣುವ ಹಬ್ಬವಾಗಿಯೂ, ತುಳುನಾಡಿನಲ್ಲಿ ಮೊಂತಿಪರ್ಬ. ದೇವಮಾತೆಯನ್ನು ಪ್ರಕೃತಿಮಾತೆಯನ್ನಾಗಿಸಿ ಕನ್ಯಾ ಮರಿಯಮ್ಮನ ಸ್ಮರಣೆ, ಆರಾಧನೆ, ಅಭಿವಂದನೆ ಸಲ್ಲಿಸುವ ಸುದಿನವೇ ಕ್ರೈಸ್ತರ ಪಾಲಿನ ಮೊಂತಿ ಹಬ್ಬ. ಕರ್ನಾಟಕ ಕರಾವಳಿಯ ಕಥೊಲಿಕ್ ಕ್ರೈಸ್ತರಲ್ಲಿ ಈ ತೆನೆಹಬ್ಬ ಮೊಂತಿಫೆಸ್ತ್ ಹೆಸರಿನಿಂದಲೇ ಹೆಚ್ಚು ಪರಿಚಿತ. ಮಾತೆ ಮರಿಯಮ್ಮ ಈ ಹಬ್ಬದ ಪೂಜ್ಯ ದೇವತೆ.

ಸ್ಥಳಿಯ ಇಗರ್ಜಿಗಳಲ್ಲಿ `ಕನ್ಯಾಕುಮಾರಿ ಮಾತೆಯ’ ಪ್ರತಿಮೆಯನ್ನು ಅಲಂಕರಿಸಿ ಸುಮಾರು ಎಂಟು ದಿನಗಳ ನಿರಂತರ ನೊವೆನಾ (ಆರಾಧನೆ) ಮತ್ತು ಪುಟಾಣಿಗಳಿಂದ ಪುಷ್ಫಾರ್ಚನೆಗೈದು ಸಂಭ್ರಮಿಕ ಪೂಜೆ ನೆರವೇರಿಸಿ ಮೊಂತಿಫೆಸ್ತ್ ಗೆ ಸಿದ್ಧತೆ ನಡೆಸಲ್ಪಡುತ್ತದೆ. ಹಬ್ಬದ ದಿನ ಅಲಂಕೃತ ಮಾತೆಯ ಪುಸ್ಥಳಿ ಮೆರವಣಿಗೆ ಸಂಭ್ರಮದೊಂದಿಗೆ ಇಗರ್ಜಿಗೆ ತರುತ್ತಾ ಜೊತೆಗೆ ರೈತರು ಬೆಳೆಸಿದ ಬತ್ತದ ಮೊದಲ `ತೆನೆ’ಯನ್ನು ಕೃಷಿಕರು ಬೆಳೆಸಿದ ಎಲ್ಲಾ ತರದ ಕಾಯಿಪಲ್ಲೆ, ತರಕಾರಿ, ದವಸಧಾನ್ಯ, ಹಣ್ಣುಹಂಪಲು ಮಾತೆಗೆ ಸಮರ್ಪಿಸುವ ರೂಢಿ. ಆಶೀರ್ವದಿಸಿ ಕೊಳ್ಳುವುದು ಹಬ್ಬದ ಸಂಪ್ರದಾಯ. ಬರೇ ಕ್ರೈಸ್ತರಲ್ಲ್ದೆ ಅನ್ಯಧರ್ಮಿಯರೂ ಹೊಲದಿಂದ ಕೊಯ್ದು ತಂದ ಹೊಸ ಭತ್ತದ ತೆನೆಗಳನ್ನು ಧಾರ್ಮಿಕ ವಿಧಿಗಳೊಂದಿಗೆ ಧರ್ಮಗುರುಗಳು ಮಾತೆಗೆ ಕೃತಜ್ಞತಾ ಪೂಜೆ ನೆರವೇರಿಸಿ, ವಿಶೇಷವಾಗಿ ತೆನೆಯನ್ನು ಆಶೀರ್ವಚಿಸುವರು. ಪೂಜೆಯ ಬಳಿಕ ಗುರುಗಳು ತೆನೆ ,ಕಬ್ಬುವನ್ನು ಮಕ್ಕಳಿಗೆ ವಿತರಿಸುವರು.
ನೆರೆದ ಭಕ್ತರು ಆಶೀರ್ವಚಿಸಿದ ಕದಿರು (ತೆನೆ) ಪಡೆದು ಪಾವಿತ್ರ್ಯತೆಯೊಂದಿಗೆ ಮನೆಗೆ ತರುವಂತಹದ್ದು. ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ, ಭಕ್ತಿಗೀತೆಗಳೊಂದಿಗೆ ಮಾತೆಯನ್ನು ಸ್ತುತಿಸಿ ಉಪಸ್ಥಿತ ಕುಟುಂಬಸ್ಥರನ್ನು ಒಳಗೊಂಡು ಯಜಮಾನನು ಮನೆಯೊಳಗೆ ಸೇರುವಂತಹದ್ದು. ನಂತರ ಕದಿರನ್ನು ಯಾವುದೇ ಆಯುಧಗಳ ಸಹಾಯವಿಲ್ಲದೆ ಬರೇ ಕೈಬೆರಳುಗಳಿಂದ ಬೇರ್ಪಡಿಸಿ ಹಾಲು ಅಥವಾ ಪಾಯಸದಲ್ಲಿ ಬೆರೆಸಿ ಮನೆ ಒಡತಿಗೆ ಮತ್ತು ಮಕ್ಕಳಿಗೆ ನೀಡುತ್ತಾ ಅದನ್ನು ಸೇವಿಸುವ ಸಂಸ್ಕೃತಿ ತೆನೆಹಬ್ಬದ ರೂಢಿ. ಬಳಿಕ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಜೀವನದ ಈ ವರೇಗಿನ ಎಲ್ಲಾ ವಿಘ್ನ ನಿವಾರಿಸಿ ಪ್ರಕೃತಿಮಾತೆ, ಭಗವಂತನು ಫಲಿಸಿದ ಪ್ರಥಮ ಫಲಕ್ಕೆ ವಂದಿಸಿ ವರ್ಷಪೂರ್ತಿ ನೆಮ್ಮದಿ ಸಮೃದ್ಧಿ ನೀಡೆಂದು ಮಕ್ಕಳು, ಹಿರಿಯರೆಲ್ಲಾ ಪ್ರಾರ್ಥಿಸುತ್ತಾ ಹೊಸಅಕ್ಕಿ ಊಟವನ್ನು ಸಸ್ಯಹಾರ ಭೋಜನವಾಗಿ ಸಂಪ್ರದಾಯಿಕವಾಗಿ ಹಬ್ಬ ಆಚರಿಸುವ ವಾಡಿಕೆ ಇಂದಿಗೂ ಮುಂದುವರಿದಿದೆ. ಹೊಸದಾಗಿ ಮದುವೆಯಾದ ಮನೆಯ ಗಂಡು, ಹೆಣ್ಣು (ಸೊಸೆ/ ಅಳಿಯ) ವಿಶೇಷವಾಗಿ ಹಬ್ಬಕ್ಕೆ ಆಹ್ವಾನಿಸಲ್ಪಟ್ಟು ಜೊತೆಗೂಡಿ ಅಹಾರ ಸೇವಿಸುವುದು ಈ ಹಬ್ಬದ ವಿಶೇಷತೆ. ಉದ್ಯೋಗಕ್ಕಾಗಿ ಬೇರೆ ಊರು, ದೇಶ-ವಿದೇಶಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಹಬ್ಬದ ಶುಭಾವಸರದಿ ಹಾಜರಿರಬೇಕು. ಅನಿವಾರ್ಯವಾಗಿ ಪಾಲ್ಗೊಳ್ಳಲು ಸಾಧ್ಯವಾದಲ್ಲಿ ಅವರ ಪಾಲನ್ನು (ಕದಿರು) ಭೋಜನದ ಮುನ್ನ ತೆಗೆದಿಡುವುದಿದೆ. ಅದನ್ನು ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ ಪ್ರಥಮ ಭೋಜನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ನದಿ, ಕಡಲ ತೀರದ ಜನತೆ ತಮ್ಮಲ್ಲಿ ವಿೂನು ಊಟಕ್ಕೆ ಮಹತ್ವ ನೀಡಿದರೆ ಇತರೆಲ್ಲೆಡೆ ಸಸ್ಯಹಾರವೇ ಪ್ರಧಾನವಾಗಿರುತ್ತದೆ. ಇಲ್ಲೂ ವಿಷಮ ಸಂಖ್ಯಾ ಪದಾರ್ಥ ತಯಾರಿ ಲೆಕ್ಕಾಚಾರ ವಿಶೇಷತೆ. ಕುಟುಂಬಸ್ಥರೆಲ್ಲರೂ ಒಗ್ಗೂಡಿ ಪರಂಪರಿಕವಾದ ಪರಿಮಾಳ ಭರಿತ ಪಾಯಾಸ, ಕೊಟ್ಟಿಗೆ ಇತ್ಯಾದಿ ತಿಂಡಿ ತಿನಸುಗಳು ಭರ್ಜರಿ ಬೀಗರೂಟವನ್ನು ಸವಿದು ಹಬ್ಬವನ್ನು ಆಚರಿಸುತ್ತಾರೆ.
ಈ ಹಬ್ಬ ಕೇವಲ ಒಂದು ದಿನದ ಆಚರಣೆಯಲ್ಲ. ಹಬ್ಬಕ್ಕಿಂತಲೂ ಮೊದಲು 9 ದಿನಗಳ ಪೂರ್ವಸಿದ್ಧತೆ ನಡೆಸಿ ಮಾತೆಮೇರಿಯ ಕೃಪೆ ಬೇಡಿಕೊಂಡು ವಿಶೇಷ ಪ್ರಾರ್ಥನೆ(ನವೇನಾ) ಎಲ್ಲಾ ರೋಮನ್ ಕಥೋಲಿಕ್ ಕ್ರೈಸ್ತ ದೇವಾಲಯ (ಚರ್ಚ್) ಗಳಲ್ಲಿ ನಡೆಯುತ್ತದೆ. ಪುಟ್ಟ ಪುಟ್ಟ ಮಕ್ಕಳು ಚೆಂದದ ಹೂಗಳನ್ನು ಚಿಕ್ಕ ಬುಟ್ಟಿಗಳಲ್ಲಿ ದೇವಾಲಯಕ್ಕೆ ಹೊತ್ತು ತಂದು ಮಾತೆ ಮೇರಿಗೆ ಭಕ್ತಿಪೂರ್ವಕವಾಗಿ ಅರ್ಪಿಸುವುದನ್ನು ನೋಡುವುದೇ ಚೆಂದ. ಒಂಬತ್ತನೆಯ ದಿನ ಹಬ್ಬದ ಸಂಭ್ರಮ. ಕಥೋಲಿಕ್ ಕ್ರೈಸ್ತ ದೇವಾಲಯಗಳಲ್ಲಿ ಪೂಜೆ ಪುರಸ್ಕಾರಗಳು ನಡೆದ ಬಳಿಕ ಎಲ್ಲೆಲ್ಲೂ ಸಂಭ್ರಮ.
ವಾಮಂಜೂರಿನಲ್ಲಿ ಸಂಭ್ರಮದಿಂದ ಮೆರವಣಿಗೆಯ ಮೂಲಕ ನವೆನಾವನ್ನು ಆರಂಭಿಸಿ ಪವಿತ್ರ ಬಲಿಪೂಜೆಯನ್ನು ಆರಂಭಿಸಲಾಯಿತು. ಮುಖ್ಯ ಗುರುಗಳಾದ ವಂದನೀಯ ಸಿಪ್ರಿಯನ್ ಪಿಂಟೊ ರವರು ಇದರ ಮುಂದಾಳತ್ವ ವಹಿಸಿದ್ದರು.



