ಬಂಟ್ವಾಳ: ಕಾವಳಪಡೂರು ಗ್ರಾಮದ ಉಗ್ಗಬೆಟ್ಟುವಿನಲ್ಲಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪದಲ್ಲಿ ಯುವತಿಯರಿಬ್ಬರನ್ನು ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಬಂಟ್ವಾಳ ಗ್ರಾಮಾಂತರ ಠಾಣೆಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ನ್ಯೂ ಲೈಫ್ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಮಂಗಳೂರಿನ ಬಿಜೈಯ ಮರ್ಸಿ ಹಾಗೂ ವಿಟ್ಲ ಪರಿಸರದ ರೋಸ್ಲೀನಾ ಉಗ್ಗಬೆಟ್ಟು ಪರಿಸರದಲ್ಲಿ ಹಿಂದೂಗಳ ಮನೆಗೆ ತೆರಳಿ ತಮ್ಮ ಸಂಘಟನೆಗೆ ಸೇರಿದ ಕರಪತ್ರವನ್ನು ಹಂಚಿಕೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇಲ್ಲಿನ ಸುಮಾರು 5-6 ಹಿಂದೂ ಮನೆಗಳಿಗೆ ಗಂಡಸರಿಲ್ಲದ ವೇಳೆ ಸಂಪರ್ಕಿಸಿ ಈ ಕರಪತ್ರಗಳನ್ನು ಹಂಚಿ ಮತಾಂತರಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದ ಈ ಯುವತಿಯರನ್ನು ತಡೆದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಯುವತಿಯರು ಅಸಮರ್ಪಕವಾಗಿ ಉತ್ತರಿಸಿದ್ದು, ಇದರಿಂದ ಅನುಮಾನಗೊಂಡ ಯುವಕರು ಸ್ಥಳೀಯ ಮಹಿಳೆಯರನ್ನು ಕರೆಸಿ ಅವರೊಂದಿಗೆ ಯುವತಿಯರನ್ನು ಠಾಣೆಗೆ ಒಪ್ಪಿಸಿದ್ದಾರೆ. ಜತೆಗೆ ಯುವಕರು ಕೂಡಾ ಠಾಣೆಗೆ ತೆರಳಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವತಿಯರನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿ ಅವರ ಬಳಿ ಮತಾಂತರಕ್ಕೆ ಸಂಬಂಧಿಸಿ ಯಾವುದೇ ಸಾಹಿತ್ಯ, ಪುಸ್ತಕಗಳು ಪತ್ತೆಯಾಗದಿರುವುದರಿಂದ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆಂದು ತಿಳಿದು ಬಂದಿದೆ.
