ಬಂಟ್ವಾಳ : ವ್ಯಕ್ತಿಯನ್ನು ಪರಿಪೂರ್ಣತೆಯ ಸ್ವರೂಪಿಯನ್ನಾಗಿಸುವುದು ಸಂಸ್ಕಾರ. ಅಂತಹ ಭಾರತೀಯ ಮೂಲ ಪರಂಪರೆ, ಸಂಸ್ಕೃತಿಯನ್ನು ಅರಿಯಲು ಸಂಸ್ಕೃತದಿಂದ ಸಾಧ್ಯ. ದೇಶದ ಒಳಿತಿಗಾಗಿ, ನಮ್ಮೆಲ್ಲರ ಒಳಿತಿಗಾಗಿ ಸಂಸ್ಕೃತದ ಅಧ್ಯಯನ ಅವಶ್ಯಕ. ಇಂತಹ ದೇವಭಾಷೆಯ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಆಯಾಮ ಯೋಗ, ನ್ಯೂರೋಪತಿ ಸೆಂಟರ್ನ ಮುಖ್ಯಸ್ಥ ಶ್ರೀಕಾಂತ್ ತಿಳಿಸಿದರು. ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸಂಸ್ಕೃತೋತ್ಸವ, ರಕ್ಷಾಬಂಧನ ಕಾರ್ಯಕ್ರಮವನ್ನುದ್ದೇಶಿಸಿ ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಜಗತ್ತಿಗೆ ಜೀವನದ ಮೌಲ್ಯ, ಸಂಸ್ಕಾರದ ಪಾಠ ಬೋಧಿಸಿರುವುದು ಹಿಂದೂ ಧರ್ಮ. ಈ ಸಮಾಜ ಒಟ್ಟುಗೂಡುವಿಕೆಯ ನೆಲೆಯಲ್ಲಿ ಆಚರಿಸುವ ಹಬ್ಬ ರಕ್ಷಾಬಂಧನ. ರಕ್ಷೆಯನ್ನು ಧಾರಣೆ ಮಾಡುವ ಮೂಲಕ ರಾಷ್ಟ್ರದ ರಕ್ಷಣೆಗೆ ಮಂದಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಸೋಮಯಾಜಿ ವಹಿಸಿದರು.
ವೇದಿಕೆಯ ಶಾಲಾ ಸ್ಥಾಪನೆಗೆ ಶ್ರಮಿಸಿದ ಊರ ಹಿರಿಯರಾದ ಮಹಾಬಲ ರೈ ಬೋಳಂತೂರು, ನಾರಾಯಣ ಪೂಜಾರಿ ಏಳ್ತಿಮಾರು, ಮಾದಪ್ಪ ಪೂಜಾರಿ ಕುದ್ರೆಬೆಟ್ಟು, ರಾಮಚಂದ್ರ ಪೂಜಾರಿಬೈಲು, ಶ್ಯಾಮ್ ಭಟ್ ಗೋಳ್ತಮಜಲು, ಸೋಮಣ್ಣ ಕುದ್ರೆಬೆಟ್ಟು, ನರಸಿಂಗ ನಾಯಕ್, ಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ವನಾಥ ಪ್ರಭು, ಮುಖ್ಯೋಪಾಧ್ಯಾಯರಾದ ಶ್ರೀ ರಮೇಶ್ ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾಬಂಧನ ಆಚರಿಸಿದರು.
ಕಾರ್ಯಕ್ರಮವನ್ನು ದಿಶಾ 10 ಚ್ಯವನ ನಿರೂಪಿಸಿ, ಶ್ರೀ ಜಿನ್ನಪ್ಪ ಏಳ್ತಿಮಾರು ಶಿಕ್ಷಕರು ಪ್ರೌಢವಿಭಾಗ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಕೃತ ಮಹತ್ವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ, ಸಂಸ್ಕೃತ ಉದ್ಘೋಷಗಳು ನಡೆದವು.
