ಕೈಕಂಬ: ಪ್ರಧಾನಮಂತ್ರಿ ಮೋದಿಯ `ಉಜ್ವಲ ಯೋಜನೆ’ಯಲ್ಲಿ ಮಾತೃ ಋಣದ ಸಂಬಂಧ ಮತ್ತು ರಾಷ್ಟ್ರ ಭಕ್ತಿಯ ಜಾಗೃತಿ ಎಂಬ ಎರಡು ವೈಯಕ್ತಿಕ ಭಾವನಾತ್ಮಕ ಸಂಬಂಧಗಳು ಬೆಸೆತಿವೆ. ಈ ಯೋಜನೆ ಪ್ರತಿ ಹಳ್ಳಿಯ ಬಡವರ(ಬಿಪಿಎಲ್) ಮನೆಗಳಲ್ಲಿ ಪ್ರಕಾಶಿಸಬೇಕೆಂಬುದು ಪ್ರಧಾನಿಯ ಆಶಯವಾಗಿದೆ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಗುರುಪುರದ ಶ್ರೀ ಸತ್ಯದೇವತೆ ಸಭಾಗೃಹದಲ್ಲಿ ಇಂದು(ಜುಲೈ 23) ಆಯೋಜಿಸಲಾಗಿದ್ದ ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಮಾಹಿತಿ ನೀಡುತ್ತ, ಇದೆಲ್ಲ ಅವರ(ಮೋದಿ) ಕನಸಿನ ಯೋಜನೆಗಳಾಗಿವೆ ; ಇದರಲ್ಲಿ ಮತ ಗಳಿಸುವ ಉದ್ದೇಶವಿಲ್ಲ ಎಂದರು.
2011ರೊಳಗೆ ಅರ್ಜಿ ಸಲ್ಲಿಸಿದವರು ಪ್ರಥಮ ಹಂತದಲ್ಲಿ ಯೋಜನೆಯ ಫಲಾನುಭವಿಗಳಾಗಲಿದ್ದರೂ, ಮುಂದಿನ ಹಂತದಲ್ಲಿ ಈಗಾಗಲೇ ವಿಸ್ತರಣೆಗೊಂಡಿರುವ `ಉಜ್ವಲ ಪ್ಲಸ್’ ಯೋಜನೆಯಡಿ ಉಳಿದ ಬಡವರಿಗೆಲ್ಲ ಉಚಿತ ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ. ಇದು ಜನರಿಗೆ ಕೊಡುವ ಭಿಕ್ಷೆಯಲ್ಲ. ಇದು ಹಕ್ಕು ಎಂದು ತಿಳಿದುಕೊಳ್ಳಿ ಎಂದು ಬಿಜೆಪಿ ಸಂಸದ ವಿವರಿಸಿದರು.
ನರೇಂದ್ರ ಮೋದಿ ಸರ್ಕಾರ ಬಡವರ ಮನೆಗೆ ಎಲ್ಇಡಿ ದೀಪ ಒದಗಿಸಿದೆ ಮತ್ತು 2020ರೊಳಗೆ ಕಡು ಬಡವರಿಗೆ ಮನೆ ಒದಗಿಸುವ ಅರ್ಥಪೂರ್ಣ ಕೆಲಸ ಮಾಡುತ್ತಿದೆ. ರಾಷ್ಟ್ರ, ಜಿಲ್ಲೆ ಹಾಗೂ ಹಳ್ಳಿಯ ಎಲ್ಲರ ಮನೆಯೂ `ಹೊಗೆಮುಕ್ತ’ವಾಗಬೇಕು ಎಂಬುದು ಮೋದಿಯ ಕಲ್ಪನೆಯಾಗಿದೆ ಎಂದರು.
ಪ್ರತಿ ಮನೆಯಲ್ಲೂ ಮಹಿಳೆಯರು ಯಾವ ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬದು ಪ್ರಧಾನಿ ಮೋದಿಗೆ ಗೊತ್ತಿದೆ. ಸ್ತ್ರೀಯರಿಗೆ ಗೌರವ ಹಾಗೂ ತಾಯಿಯ ಸ್ಥಾನಮಾನ ನೀಡಬೇಕು ಎಂಬುದು ಮೋದಿಗೆ ಗೊತ್ತಿದ್ದು, ಈ ನಿಟ್ಟಿನಲ್ಲಿ ಅವರ ಕನಸಿನ ಯೋಜನೆಗಳು ಗ್ರಾಮೀಣ ಮಟ್ಟದಿಂದಲೇ ಆರಂಭವಾಗುತ್ತಿವೆ ಎಂದು ಮಾಜಿ ಸಚಿವ ಸಚಿವ ಕೃಷ್ಣ ಪಾಲೆಮಾರ್ ಹೇಳಿದರು.

ಬಂಟ್ವಾಳದಲ್ಲಿ ಶರತ್ ಮಡಿವಾಳರ ಶವದ ಮೆರವಣಿಗೆ ಹೋಗುತ್ತಿದ್ದಾಗ ಕಾಂಗ್ರೆಸ್ಸಿನವರೇ ಕಲ್ಲು ತೂರಾಟ ನಡೆಸಿದರು. ಇದು ದ್ವೇಷ ರಾಜಕೀಯಲ್ಲದೆ ಮತ್ತೇನು ? ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಜನರಿಗೆ ಉತ್ತಮ ಆಡಳಿತ ನೀಡುತ್ತ ಬಂದಿದೆ. ಬಡವರ ಪರವಾಗಿ ಕೆಲಸ ಮಾಡಿದೆ. ಇದನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ ಆಡಳಿತ ಬಂದರೆ ಮಾತ್ರ ನಿಮಗೆ ಮನೆ, ನೀರು, ಗ್ಯಾಸ್, ವಿದ್ಯುತ್ ಮೊದಲಾದ ಮೂಲಸೌಕರ್ಯಗಳೂ ಸುಲಭವಾಗಿ ಕೈಗೆಟಕಲಿವೆ ಎಂದರು.

ವೇದಿಕೆಯಲ್ಲಿ ವೈ ಭರತ್ ಶೆಟ್ಟಿ, ಬೃಜೇಶ್ ಚೌಟ, ದೇಜು ಪೂಜಾರಿ, ಪ್ರಭಾಕರ ಶೆಟ್ಟಿ, ಶಶಿಕಲಾ, ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ಪ್ರವೀಣ್ ಕುಮಾರ್, ಚರಣ್ ಕುಮಾರ್ ಹಾಗೂ ಹರೀಶ್ ಮೂಡುಶೆಡ್ಡೆ, ಅಶ್ವತ್ಥ ಬಂಗೇರ, ಅಶೋಕ್ ಕೋಟ್ಯಾನ್, ಶೇಖರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮಣ ಶೆಟ್ಟಿಗಾರ ಸ್ವಾಗತಿಸಿದರೆ, ವಕೀಲ ಜಯಪ್ರಕಾಶ್ ಭಂಡಾರಿ ವಂದಿಸಿದರು.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

