ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ‘ಪಂಚವರ್ಗತಾರ’ ಚಿನ್ನ ಲೇಪಿತ ಧ್ವಜಸ್ತಂಭಕ್ಕೆ ಕೆಲ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿನ್ನ ಲೇಪಿತ ಗರುಡಗಂಬವನ್ನು ಭಾನುವಾರ ಬೆಳಗ್ಗೆಯಷ್ಟೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದ ಕೆಲವೇ ಗಂಟೆಗಳಲ್ಲಿ ಧ್ವಜಸ್ತಂಭಕ್ಕೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣದ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ದೇವಸ್ಥಾನದ ಆವರಣದಲ್ಲಿನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಲಾಗಿದೆ . ಈ ವೇಳೆ ಕೆಲ ವ್ಯಕ್ತಿಗಳು ಧ್ವಜಸ್ತಂಭದ ಅಡಿಪಾಯಕ್ಕೆ ದ್ರವವೊಂದನ್ನು ಸುರಿಯುತ್ತಿರುವ ದೃಶ್ಯ ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆದಿದ್ದು, ಸುರಿಯುತ್ತಿರುವ ದ್ರವ ಎಂದು ಪಾದರಸ ಎಂದು ತಿಳಿದಿದೆ.ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಡಿಜಿಪಿಗೆ ದೂರು ನೀಡಿದೆ. ಈ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ವಿಶೇಷ ಫೋರೆನ್ಸಿಕ್ ತಜ್ಞರ ತಂಡದ ನಿಯೋಜಿಸುವುದಾಗಿ ಡಿಜಿಪಿ ತಿಳಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಐವರು ಆಂಧ್ರ ಮೂಲದ ವಲಸೆ ಕಾರ್ಮಿಕರು ಎನ್ನಲಾಗಿದೆ.ತೇಗದ ಮರದ ಧ್ವಜಸ್ತಂಭಕ್ಕೆ 9.16 ಕೆಜಿ ಚಿನ್ನ, 300 ಕೆಜಿ ತಾಮ್ರ, 17 ಕೆಜಿ ಬೆಳ್ಳಿಯಿಂದ ನಿರ್ಮಿಸಲಾಗಿದ್ದು, ಬೆಳಗ್ಗೆ ಪ್ರತಿಷ್ಟಾಪನೆಗೊಂಡ ಈ ಧ್ವಜಸ್ತಂಭ ಮಧ್ಯಾಹ್ನದ ಹೊತ್ತಿಗೆ ಹಾನಿಗೊಳಗಾಗಿದೆ.
