ಬಂಟ್ವಾಳ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ದೀಕರಿಸಿದ ನೀರನ್ನು ಎಲ್ಲ ಜನರಿಗೂ ಒದಗಿಸುವ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಬಂಟ್ವಾಳವಾಗಲಿದೆ. ಸರಕಾರ 5 ಯೋಜೆನಗಳಿಗೆ ಮಂಜೂರಾತಿ ನೀಡಿದೆ, ಈಗಾಗಲೇ ಕೆಲವೊಂದು ಯೋಜನೆಗಳು ಪ್ರಾಯೋಗಿಕವಾಗಿ ಚಾಲನೆಗೊಂಡಿದ್ದು ಎರಡು ಯೋಜನೆಗಳಿಗೆ ಸರಕಾರ ಹೊಸದಾಗಿ ಮಂಜೂರಾತಿ ನೀಡಿದೆ. ಎಲ್ಲಾ ಯೋಜನೆಗಳು ಅನುಷ್ಠಾನಗೊಂಡ ಬಳಿಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಹಂತ 4 ಗಾಂಧಿಪಥ-ಗ್ರಾಮ ಪಥ ಇದರ 2.3 ಕೋಟಿ ರುಪಾಯಿ ಅನುದಾನದಲ್ಲಿ ಜಾರಂದಗುಡ್ಡೆ-ಕನಪಾಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಳ್ಳಿಗೆ ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ದಿಗೊಂಡಿದ್ದು, ನೆತ್ತರೆಕೆರೆ ಸಂಪರ್ಕ ರಸ್ತೆಯ ಅಭಿವೃದಿ ಕಾಮಗಾರಿ ನಬಾರ್ಡ್ ಯೋಜನೆಯ ಮೂಲಕ ಈ ಬಾರಿ ಮಂಜೂರಾತಿಗೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಗಾಂಧಿಪಥ- ಗ್ರಾಮಪಥ ಯೋಜನೆಯಡಿ 7 ರಸ್ತೆಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿವೆ. ಕಳ್ಳಿಗೆ ಗ್ರಾಮದಲ್ಲಿಯೂ ಶೇ.75ರಷ್ಟು ರಸ್ತೆ ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿವೆ. ಇದೆಲ್ಲವೂ ಪ್ರಧಾನಿಗೆ ಪತ್ರ ಬರೆದು ಆಗಿರುವಂತದಲ್ಲ. ಸಚಿವ ರಮಾನಾಥ ರೈ ಅವರ ಪ್ರಯತ್ನದ ಫಲವಾಗಿದೆ ಎಂದರು.
