ಕಲ್ಲಡ್ಕ: ಸಮಾಜಕ್ಕೆ ಅನ್ಯಾಯವಾದಾಗ ಒಟ್ಟಾಗಿ ಆಲೋಚನೆ ಮಾಡಿ ಸಂಘಟಿತ ಜನಶಕ್ತಿಯನ್ನು ಸಾಧಿಸಬೇಕು. ಹಿಂದುಗಳ ಮೇಲೆ ಆಗುತ್ತಿರುವ ನಿರಂತರ ಆಕ್ರಮಣವನ್ನು ತಡೆಗಟ್ಟುವುದು ಇಂದು ಅವಶ್ಯಕವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಹೇಳಿದರು.
ಅವರು ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಜನಶಕ್ತಿ ಸೇವಾ ಟ್ರಸ್ಟ್ ಇದರ ವತಿಯಿಂದ ಏರ್ಪಡಿಸಲಾದ ಶ್ರೀ ಮಣಿಕಂಠ ಯುವಶಕ್ತಿ ಇದರ ರಜತ ಸಂಭ್ರಮ ಹಾಗೂ ಶ್ರೀ ಮಣಿಕಂಠ ಭಜನಾ ಮಂದಿರದ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ದುರ್ಬಲವಾದರೆ ಎಲ್ಲಾ ರೀತಿಯ ಆಕ್ರಮಣ ನಡೆಯುತ್ತವೆ . ಭಾರತೀಯ ಸಂಸ್ಕೃತಿ ಪ್ರಕೃತಿ ಪೂಜೆ ಮಾಡುವ ಮೂಲಕ ವಿಶೇಷತೆಯನ್ನು ಹೊಂದಿದೆ. ಸಂತರು, ಮಾತೆಯರು ಭಾರತೀಯ ಸಂಸ್ಕ್ರತಿಯ ಸಂರಕ್ಷಕರಾಗಿದ್ದು ಮಾತೃ ಶಕ್ತಿ ಮತ್ತು ಯುವಶಕ್ತಿ ಜಾಗೃತವಾಗಬೇಕು ಎಂದರು. ಜನವರಿ 29 ರಂದು ಮಂಗಳೂರಿನ ಕೂಳೂರುನಲ್ಲಿ ನಡೆಯುವ ಗೋಯಾತ್ರ – ಮಹಾಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಭಟ್ ಕರೆ ನೀಡಿದರು.
ಮಾಣಿ ಬ್ರಹ್ಮಶೀ ನಾರಾಯಣ ಗುರು ಮಂದಿರದ ಅಧ್ಯಕ್ಷ ನಾರಾಯಣ ಪೂಜಾರಿ ಅನಂತಾಡಿ ಮಾತನಾಡಿ ನಾರಾಯಣ ಗುರುಗಳು ವಿಶ್ಚ ಮಾನವ ಸಂದೇಶವನ್ನು ನೀಡಿದ್ದಾರೆ. ಮೇಲು ಕೀಳು ಎಂಬ ಭೇದ ವಿಲ್ಲದೆ ಸರ್ವರೂ ಸಹಭೋಜನದಲ್ಲಿ ಭಾಗವಹಿಸುವ ಮೂಲ ಹಿಂದೂ ಸಮಾಜ ಒಗ್ಗಟ್ಟಾಗಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಉದ್ಯಮಿಗಳಾದ ಸಂತೋಷ್ ಕುಮಾರ್ ಅರೆಬೆಟ್ಟು, ಆರ್.ಕೆ ಶೆಣೈ ಏಳ್ತಿಮಾರು, ಉಮೇಶ್ ಸಾಲಿಯಾನ್ ಬೆಂಜನಪದವು, ಉಮೇಶ್ ಆಚಾರ್ಯ ಅಮ್ಟಾಡಿ, ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಕುಮಾರ್, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ವಿದ್ಯಾವತಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಗಣ್ಯರಾದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೆ ಪದ್ಮನಾಭ ಕೊಟ್ಟಾರಿ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು ಮೊದಲಾದವರು ಭಾಗವಹಿಸಿದ್ದರು.
ಜನಶಕ್ತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ಧರ್ಮದಬಳ್ಳಿ ಸ್ವಾಗತಿಸಿ, ಅಧ್ಯಕ್ಷ ಜಿನ್ನಪ್ಪ ಏಳ್ತಿಮಾರು ಪ್ರಸ್ತಾವನೆ ಗೈದರು. ಸಂತೋಷ್ ಕುಮಾರ್ ಬೊಳ್ಪೋಡಿ, ರವಿ ಸುವರ್ಣ ಬೈಲು ವಂದಿಸಿದರು. ಭೋಜರಾಜ್ , ರಾಜೇಶ್ ಕಲ್ಲಡ್ಕ ನಿರೂಪಿಸಿದರು.
ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ಪೌರೋಹಿತ್ಯದಲ್ಲಿ ನವ ಚಂಡಿಕಾಯಾU ನೆರೆವೇರಿತು. ವಿವಿಧ ಭಜನಾ ಮಂಡಳಿಯಿಂದ ಭಜನೆ, ಅನ್ನಸಂತರ್ಪಣೆ, ಸಂಪೂರ್ಣ ದೇವಿ ಮಾಹಾತ್ಮೆ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು.

