ಬಂಟ್ವಾಳ: ಶಿಕ್ಷಣದ ಉದ್ದೇಶ ಕೇವಲ ಹಣಗಳಿಕೆಗೆ ಸೀಮಿತವಾಗಿರದೆ ಅದು ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಂತಿರಬೇಕು ಎಂದು ಅಳಿಕೆ ಶ್ರೀ ಸತ್ಯಸಾಯಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಪದ್ಯಾಣ ನಾರಾಯಣ ಭಟ್ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಉಳಿ ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯಲ್ಲಿ ಉಚಿತ ಲೇಖನ ಸಾಮಾಗ್ರಿ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲಾ ಸಂಚಾಲಕ ಕೆ.ಜಾರಪ್ಪ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾದಾನ ಶ್ರೇಷ್ಠದಾನವಾಗಿದ್ದು ಊರವರ ಸಹಕಾರದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತಾಗಿದೆ ಎಂದು ಹೇಳಿದರು.
ಬಂಟ್ವಾಳ ತಾ.ಪಂ.ಸದಸ್ಯ ಸಂಪತ್ ಕುಮಾರ್ ಶೆಟ್ಟಿ , ಉಳಿ ಗ್ರಾ.ಪಂ.ಅಧ್ಯಕ್ಷ ಎ.ಚೆನ್ನಪ್ಪ ಸಾಲಿಯಾನ್, ಬಡೆಕೊಟ್ಟು ಶಾಲೆಯ ನಿವೃತ್ತ ಶಿಕ್ಷಕ ಎ.ಮುತ್ತಪ್ಪ ಗೌಡ ಅಗಲ, ಕಕ್ಯಪದವು ಜುಮ್ಮಾ ಮಸೀದಿ ಅಧ್ಯಕ್ಷ ಎ.ಅಬ್ದುಲ್ ರಹಿಮಾನ್, ಬಿ.ಸಿ.ರೋಡ್ ಜೇನು ಸೊಸೈಟಿ ಪ್ರಬಂಧಕ ಗುಣಶೇಖರ ಕೊಡಂಗೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರು , ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾನಿ ಅಣ್ಣು ಪೂಜಾರಿ ಓಡಾರಿಕೋಡಿ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಅವರು ಸ್ವಾಗತಿಸಿದರು. ಶ್ರೀ ಕ್ಷೇತ್ರ ಕಕ್ಯಬೀಡಿನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಳಿ ದಾಮೋದರ ನಾಯಕ್ ವಂದಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
