ಉಳ್ಳಾಲ: ಈದ್ ಮೀಲಾದ್ ಆಚರಣೆ ಪ್ರವಾದಿಯವರ ಮೇಲೆ ಪ್ರೀತಿ ವಿಶ್ವಾಸ, ನಂಬಿಕೆಯಿಂದ ಗೌರವಪೂರ್ವಕವಾಗಿ ಮಾಡಬೇಕೇ ಹೊರತು ಇತರ ಧರ್ಮದವರ ವಿರುದ್ಧ ಸೇಡು ತೀರಿಸುವ ಉದ್ದೇಶದಿಂದ ಆಗಬಾರದು. ಒಂದು ವೇಳೆ ಇತರ ಧರ್ಮದವರಿಗೆ ತೊಂದರೆ ಆಗುವ ರೀತಿಯಲ್ಲಿ ಆಚರಿಸಿದರೆ ಅದು ಸ್ವೀಕಾರ ಆಗುವುದಿಲ್ಲ ಎಂದು ರಫೀಕ್ ಸಅದಿ ದೇಲಂಪಾಡಿ ಹೇಳಿದರು.
ಅವರು ಮಂಜನಾಡಿಯ ಅಲ್ ಮದೀನದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಪ್ರಯುಕ್ತ ನಡೆದ ವಾರ್ಷಿಕ ದ್ಸಿಕ್ರ್ ಮತ್ತು ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಾದಿಯವರನ್ನು, ಮಕ್ಕಾವನ್ನು ಪ್ರೀತಿಸಿ ಗೌರವಿಸಿದ ರೀತಿಯಲ್ಲಿ ನಾವು ವಾಸ ಮಾಡುವ ದೇಶವನ್ನು ಪ್ರೀತಿ ಗೌರವದಿಂದ ನೋಡಬೇಕಾಗಿದೆ. ದೇಶದ ಮೇಲೆ ಗೌರವ ಇಲ್ಲದಿದ್ದರೆ ಧರ್ಮ ಮತ್ತು ಸಮಾಜದಲ್ಲಿ ಸ್ಥಾನ ಸಿಗದು ಎಂದರು.

ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯದ್ ಅಬ್ದುರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಸ್ವಲಾತ್ ಮಜ್ಲಿಸ್ನ ನೇತೃತ್ವ ವಹಿಸಿದ್ದರು. ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಅಸಯ್ಯದ್ ಅಶ್ರಫ್ ತಂಙಳ್ ಆದೂರು, ವಾಲೆಮೊಂಡೂವು ಉಸ್ತಾದ್, ಸಯ್ಯದ್ ಖುಬೈಬ್ ತಂಙಳ್ ಸಯ್ಯದ್ ಯಾಸೀರ್ ಹುಸೈನ್ ತಂಙಳ್, ಎಸ್ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್.ಕೆ. ಖಾದರ್ ಹಾಜಿ, ಎಸ್ಎಂಎ ಜಿಲ್ಲಾಧ್ಯಕ್ಷ ಕತ್ತರ್ ಬಾವಾಹಾಜಿ, ಏಷ್ಯನ್ ಬಾವಾ ಹಾಜಿ, ಹಸನ್ ಹಾಜಿ ಸಾಂಬಾರ್ ತೋಟ, ಬ್ಯಾರಿ ಮೇಲ್ತನೆ ಅಧ್ಯಕ್ಷ ಆಲಿಕುಂಞ ಪಾರೆ, ಸಿದ್ದೀಕ್ ಸಖಾಫಿ ಕಲ್ಕಟ್ಟ ಎಸ್ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಮಹಮ್ಮದ್ ಹಾಜಿ ಕಂಡಿಕ ಪುತುಬಾವ ಹಾಜಿ ಸಾಂಬಾರ್ತೋಟ, ಮಂಜನಾಡಿ ಗ್ರಾ.ಪಂ. ಸದಸ್ಯ ಕುಂಞಬಾವು ಕಲ್ಕಟ್ಟ, ಕೆಎಂಕೆ ಮಾಸ್ಟರ್, ಸೌಕತ್ ಹಾಜಿ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಅತಿಥಿಗಳನ್ನು ಸ್ವಾಗತಿಸಿದರು.

