ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಬಾಲಕರೊಬ್ಬರನ್ನು ವಾಹನದಲ್ಲಿ ಬಂದಿದ್ದ ತಂಡವೊಂದು ಅಪಹರಿಸಿಕೊಂಡು ಹೋಗಿದೆ ಎಂದು ವದಂತಿ ಹಬ್ಬಿದ ಘಟನೆ ನಡೆದಿದೆ.
ಇದರಿಂದಾಗಿ ಶನಿವಾರ ಮಧ್ಯಾಹ್ನದಿಂದ ಸಂಜೆತನಕವೂ ಶಾಲೆ ಬಳಿ ರಸ್ತೆಯುದ್ದಕ್ಕೂ ಅಪಾರ ಮಂದಿ ಸ್ಥಳೀಯರು ಜಮಾಯಿಸಿ ಇಲ್ಲಿನ ಶಿಕ್ಷಕರು ಮತ್ತು ಮಕ್ಕಳ ಹೆತ್ತವರಿಗೆ ಮೊಬೈಲ್ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿದೆ. ಈ ನಡುವೆ ಸುದ್ದಿ ತಿಳಿದು ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ನೇತೃತ್ವದ ಪೊಲೀಸರು ಧಾವಿಸಿ ಬಂದು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಾಲಕನನ್ನು ಅಪಹರಿಸಿಕೊಂಡು ಹೋಗಿರುವುವುದನ್ನು ಯಾರೂ ನೋಡಿರದಿದ್ದರೂ ಈ ವದಂತಿ ಹೇಗೆ ಉದ್ಭವವಾಗಿದೆ ಎಂಬುದು ಮಾತ್ರ ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಇದೊಂದು ಹುಸಿ ಕರೆಯಿಂದ ವದಂತಿ ಉದ್ಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

