ವಿಟ್ಲ : ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯೆಯ ಪತಿ ಸುಮಾರು 50 ಮಂದಿಗೆ ವಿವಿಧ ರೀತಿಯಲ್ಲಿ 3 ಕೋಟಿ ರೂ. ಉಂಡೆ ನಾಮ ಇಟ್ಟು, ಕೆಲವು ಸಮಯದಿಂದ ತಲೆಮರೆಸಿಕೊಂಡು ಗುರುವಾರ ಬೊಬ್ಬೆಕೇರಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಪೊಲೀಸ್ ಅತಿಥಿಯಾದ ಘಟನೆ ನಡೆದಿದೆ.
ವಿಟ್ಲ ಪಟ್ಟಣ ಪಂಚಾಯಿತಿ 10ನೇ ವಾರ್ಡ್ ಸದಸ್ಯೆಯ ಪತಿ ಪುರಂದರ ಸೇರಾಜೆ(39) ವಂಚನೆ ನಡೆಸಿದ ವ್ಯಕ್ತಿಯಾಗಿದ್ದಾರೆ. ಕೆಲವು ಸಮಯದಿಂದ ನಾಗರೀಕರ ಮುಂದೆ ಕಾಣಿಸಿಕೊಳ್ಳದ ಈತ ಗುರುವಾರ ಬೊಬ್ಬೆಕೇರಿಯಲ್ಲಿರುವ ತಮ್ಮ ಹೋಟೇಲ್ನಿಂದ ವಸ್ತುಗಳನ್ನು ಸಾಗಾಟ ಮಾಡಲು ಯತ್ನಿಸಿದಾಗ ನಾಗರೀಕರು ಗಮನಿಸಿ ಹಿಡಿದು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರಿಗೆ ಸುಮಾರು 50 ಮಂದಿ ನೀಡಿದ ದೂರಿನ ಹಿನ್ನಲೆಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎಟಿಎಂ ನಂತೆ ಠಾಣೆಯಲ್ಲಿ ಸಾಲು ನಿಂತ ಜನ!
ವಂಚನೆ ನಡೆಸಿದ ಪುರಂದರ ಪೊಲೀಸ್ ವಶದಲ್ಲಿದ್ದಾನೆಂಬ ಸುದ್ದಿ ತಿಳಿಯುತ್ತಿದ್ದಂತೆ ಲಕ್ಷ ಲಕ್ಷ ಹಣ ಕಳೆದುಕೊಂಡು ಜನರು ಠಾಣೆಗೆ ಆಗಮಿಸಿ ಎಟಿಎಂ ಮುಂದು ನೋಟಿಗಾಗಿ ಸಾಲು ನಿಂತಂತೆ ಠಾಣೆಯ ಮುಂದೆ ಹಣಕ್ಕಾಗಿ ಸಾಲು ನಿಂತು ತಮ್ಮ ಹಣದ ವಿಚಾರವನ್ನು ಹೇಳಿಕೊಳ್ಳಲಾರಂಭಿಸಿದರು. ಕೆಲವರಂತೂ ಆತನಲ್ಲೇ ಹೋಗಿ ನಮ್ಮ ಹಣ ಯಾರ ಕೈಗೆ ನೀಡಿದೆ, ನಿನ್ನ ಹಿಂದೆ ಪ್ರಭಾವಿಗಳಿದ್ದಾರಾ, ನಿನ್ನ ಹಣ ಅವರಲ್ಲಿದೆಯಾ, ನೀನು ಸತ್ಯ ಹೇಳಿದರೆ ನಾವು ನಿನಗೆ ಸಹಕರಿಸುತ್ತೇವೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದರು. ಆತ ಮಾತ್ರ ಏನೂ ಅರಿಯದವನಂತೆ ಕುಳಿತಿದ್ದುದು ಹಲವು ಅನುಮಾನಗಳನ್ನು ಮೂಡಿಸುತ್ತದೆ.
ಕುರಿ – ಉದ್ಯಮ ಹೆಸರಿನಲ್ಲಿ ಹಣ:
ಕಳೆದ 5 ವರ್ಷದಿಂದ 5.25ಲಕ್ಷದ ಒಂದು, 3.60ಲಕ್ಷದ ಎರಡು, 2 ಲಕ್ಷದ ಎರಡು, 1 ಲಕ್ಷದ ಎರಡು, 60 ಸಾವಿರದ ಒಂದು ಕುರಿಯನ್ನು ಸುಮಾರು 35 ಮಂದಿಯ ಹೆಸರಿನಲ್ಲಿ ನಡೆಸಿಕೊಂಡು ಬಂದಿದ್ದಾರೆನ್ನಲಾಗಿದೆ. ಇದರಲ್ಲಿ ಕೆಲವರಿಗೆ ಹಣ ಸಿಗದೆ ವಂಚನೆಯಾಗಿದ್ದು, ಹಿಂದಿರುಗಿಸುವಂತೆ ಆತನ ಹಿಂದೆ ಬಿದ್ದಿದ್ದರು.
ಐಶಾರಾಮಿ ಜೀವನದಲ್ಲಿ ಹಣ ಪೋಲು?
ಕೈಯಲ್ಲಿ ಕಿರಿಯ ಲಕ್ಷಗಟ್ಟಲೆ ಹಣ ಬಂದು ಹೋಗುತ್ತಿದ್ದುದರಿಂದ 3 -4 ಐಶಾರಾಮಿ ಕಾರುಗಳನ್ನಿಟ್ಟುಕೊಂಡು ಸುತ್ತುತ್ತಿದ್ದರು. ಕೆಲವೊಂದು ಹೋಟೇಲುಗಳಲ್ಲಿ ಪಾರ್ಟಿಗಳನ್ನು ಮಾಡಿಕೊಂಡು 25 ಸಾವಿರ ವರೆಗಿನ ಬಿಲ್ಲುಗಳನ್ನು ಒಬ್ಬರೇ ಪಾವತಿಸಿಕೊಂಡಿದ್ದರೆಂಬ ಮಾಹಿತಿ ಇದೆ.

