ಉಡುಪಿ: ಆಗುಂಬೆ ಘಾಟಿ ತಿರುವಿನ ಡಾಮರು ಕಾಮಗಾರಿ ಡಿ. 1ರಿಂದ ನಡೆಯುವ ಕಾರಣ ಡಿ. 1ರಿಂದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸುಮಾರು 20 ದಿನಗಳ ಕಾಲ ಕಾಮಗಾರಿ ನಡೆಯಬಹುದೆಂದು ಅಂದಾಜಿಸಲಾಗಿದೆ. ಈ ನಿಷೇಧದ ಸಮಯದಲ್ಲಿ ಉಡುಪಿ ಜಿಲ್ಲೆಯಿಂದ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗುವವರು ಉಡುಪಿ, ಬಾರಕೂರು ಮೂಲಕ ಅಥವಾ ಉಡುಪಿ, ಕುಂದಾಪುರ, ಬಸ್ರೂರು ಮೂಲಕ ಸಿದ್ಧಾಪುರಕ್ಕೆ ತೆರಳಿ ಅಲ್ಲಿಂದ ಬಾಳೆಬರೆ ಘಾಟಿ ಮೂಲಕ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗಬಹುದು. ದ.ಕ. ಜಿಲ್ಲೆಯಿಂದ ಹೋಗಬೇಕಾದವರು ರಾ.ಹೆ. 13 ಕಾರ್ಕಳ, ಬಜಗೋಳಿ, ಶೃಂಗೇರಿ, ಕೊಪ್ಪ ಮಾರ್ಗವಾಗಿ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗಬಹುದು. ಶೃಂಗೇರಿಯಿಂದ ಬೇಗಾರು, ಮಾವಿನಕಟ್ಟೆ, ಕಮ್ಮರಡಿ, ಕಲ್ಮನೆ ಮೂಲಕ ತೀರ್ಥಹಳ್ಳಿಗೆ ಹೋಗಬಹುದು, ಬರುವಾಗ ಇದೇ ಮಾರ್ಗದಲ್ಲಿ ಬರಬಹುದು.
ಆಗುಂಬೆ ಘಾಟಿಯ 7ನೇ ತಿರುವಿನಿಂದ 14ನೇ ತಿರುವಿನವರೆಗೆ ಸುಮಾರು 2.5 ಕಿ.ಮೀ.ವರೆಗೆ ಕಾಮಗಾರಿ ನಡೆಯಲಿದೆ.ಈ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಆಗುಂಬೆ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಈ ಕಾಮಗಾರಿಯನ್ನು ತೀರ್ಥಹಳ್ಳಿಯ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ. ಈಗ ಸುಮಾರು 4 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಕೃಪೆ: ಸಿ ಆಂಡ್ ಸೇ ಕನ್ನಡ

