ಕಿನ್ನಿಗೋಳಿ; ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನೆರೆ, ಹಾಗೂ ಬಳ್ಕುಂಜೆ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ವಿಠೋಬಾ ರಕುಮಾಯಿ ವಠಾರದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ಮಳೆಗಾಲ ವಿಳಂಬವಾಗುವುತ್ತಿರುವುದರಿಂದ ಕೃಷಿಕರು ನದಿ ಹಾಗೂ ಬಾವಿಗಳಿಂದ ತಮ್ಮ ಗದ್ದೆಗಳಿಗೆ ನೀರನ್ನು ಹಾಯಿಸಿದಾಗ ಉಪ್ಪು ನೀರು ಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒಕ್ಕೊರಲಿನಿಂದ ಎಂದು ಗ್ರಾಮಸ್ಥರು ದನಿಯೆತ್ತಿದರು. ಕಿಂಡಿ ಅಣೆಕಟ್ಟಿನ 3 ಗೇಟುಗಳ ಅಸಮರ್ಪಕ ಜೋಡಣೆಯಿಂದ ಇಂತಹ ಸಮಸ್ಯೆ ತಲೆದೋರಿದೆ. ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ಇಲಾಖಾಧಿಕಾರಿಗಳಲ್ಲಿ ಕಿಂಡಿ ಅಣೆಕಟ್ಟಿನ ಬಗ್ಗೆ ಮನವಿ ಮಾಡಿ ಮುಂದಿನ ನವೆಂಬರ್ ನೊಳಗೆ ಸಮಸ್ಯೆ ನಿವಾರಿಸಲು ಪ್ರಯತ್ನಿಸೋಣ ಎಂದು ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದರು.
ಬಳ್ಕುಂಜೆ ಬಸ್ಸು ತಂಗುದಾಣ ಬೀಳುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರ ದೂರಿಗೆ ಬಸ್ಸು ತಂಗುದಾಣ ತೆರವುಗೊಳಿಸಿ ಮುಂಬರುವ ದಿನಗಳಲ್ಲಿ ಸರಕಾರದ ಸೂಕ್ತ ಅನುದಾನ ಬಳಸಿ ಹೊಸ ತಂಗುದಾಣ ನಿಮರ್ಿಸಲು ಪ್ರಯತ್ನಿಸಲಾಗುವುದು. ಎಂದು ಅಧ್ಯಕ್ಷರು ತಿಳಿಸಿದರು.
ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ವಾರ್ಡ್ ನಡೆಯುವ ನಿಗದಿತ ದಿನಾಂಕದ ಮಾಹಿತಿ ಗ್ರಾಮಸ್ಥರಿಗೆ ಯಾಕೆ ಕ್ಲಪ್ತ ಸಮಯದಲ್ಲಿ ತಿಳಿಸುವುದಿಲ್ಲ ಇನ್ನಾದರೂ ನಿಖರ ಮಾಹಿತಿ ನೀಡಬೇಕೆಂದು ಗ್ರಾಮಸ್ಥರೊಬ್ಬರು ನಿವೇದನೆ ಮಾಡಿಕೊಂಡರು.
ಪಡಿತರ ಚೀಟಿ ಗೊಂದಲ ಇರುವ ಈ ಸಮಯದಲ್ಲಿ ಆಹಾರ ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯುತ್ ಸಮಸ್ಯೆ ಇರುವಾಗ ಮೆಸ್ಕಾಂ ಅಧಿಕಾರಿಗಳು ಸಭೆಗೆ ಹಾಜಾರಾಗುತ್ತಿಲ್ಲ ಯಾಕೆ ? ಅವರನ್ನು ಮುಂದಿನ ಸಭೆಯಲ್ಲಿ ಹಾಜಾರಾಗುವಂತೆ ಗ್ರಾಮಸ್ಥರು ಒಕ್ಕೊಲರಿನಿಂದ ಪಂಚಾಯಿತಿ ಆಡಳಿತಕ್ಕೆ ಭಿನ್ನವಿಸಿಕೊಂಡರು.
17 ಗ್ರಾಮಗಳಿಗೆ ಕುಡಿಯುವ ನೀರು ಪೊರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣಗೊಂಡಾಗ ನೀರು ಸಮಸ್ಯೆ ಹಾಗೂ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಬಹುತೇಕ ನೀಗಬಲ್ಲುದು ಎಂದು ಅಧಿಕಾರಿಗಳು ತಿಳಿಸಿದರು.
ಶಿಶು ಅಭಿವೃದ್ಧಿ ಇಲಾಖೆಯ ಜಯಂತಿ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ನೆಲ್ಸನ್ ಲೋಬೋ, ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್, ಗ್ರಾ. ಪಂ. ಉಪಾಧ್ಯಕ್ಷೆ ಜಲಜ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಲಜ ಟಿ, ಕಾರ್ಯದರ್ಶಿ ನಾರಾಯಣ, ಸಹಾಯಕ ಕೃಷಿ ನಿರ್ದೆಶಕ ಎಂ. ಬಾಲಕೃಷ್ಣ, ಗ್ರಾಮಕರಣಿಕ ಕಿರಣ್ ಕುಮಾರ್, ಕೆ. ಸಂತೋಷ್, ಶಿಕ್ಷಣ ಇಲಾಖೆಯ ಜಗದೀಶ ನಾವಡ, ಅರಣ್ಯ ಇಲಾಖೆಯ ಪರಮೇಶ್ವರ, ಪಂಚಾಯತ್ ರಾಜ್ ಇಂಜೀನಿಯರಿಂಗ್ ವಿಭಾಗದ ಪ್ರಶಾಂತ್ ಆಳ್ವ ಮತ್ತಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

