ಚೆನ್ನೈ: ಅನಾರೋಗ್ಯದಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅ.16 ರಂದು ಸಂಜೆ 6.15 ಕ್ಕೆ ತಮ್ಮ ಹಿರಿಯ ಪುತ್ರಿ ಐಶ್ವರ್ಯಾ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್ 25 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿದ್ದು, ಅಲ್ಲಿನ ವೈದ್ಯರಿಂದ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.ಈ ಮುಂಚೆ ಜಯಲಲಿತಾ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಜನಿ, ಸಿಎಂ ಶೀಘ್ರ ಚೇತರಿಕೆ ಕಾಣಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಲಲಿತಾ ಸೆ.22ರಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ತಮಿಳುನಾಡು ಸಿಎಂ ಇನ್ನೂ ತೀವ್ರ ನಿಗಾ ಘಟಕದಲ್ಲಿದ್ದು, ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ.
ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪೂರ್ ಗೆ ಜಯಲಲಿತಾ ಅವರನ್ನು ಸ್ಥಳಾಂತರ ಮಾಡಲಾಗುವುದು ಎನ್ನಲಾಗುತ್ತಿದೆ. ಏನೇ ಆದರೂ, ಅಪೋಲೋ ಆಸ್ಪತ್ರೆಯಲ್ಲಿ ವಿಐಪಿಗಳಿಗಷ್ಟೆ ಅವಕಾಶ ನೀಡಲಾಗಿದ್ದು ಸಿಎಂ ಜಯಲಲಿತಾ ವಾರ್ಡ ಗೆ ರಜನಿಕಾಂತ್ ಗೂ ಸಹ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಈ ಹಿಂದೆ ರಾಹುಲ್ ಗಾಂಧಿ, ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಸೇರಿದಂತೆ ಹಲವು ಗಣ್ಯರು ಆಸ್ಪತ್ರಗೆ ಭೇಟಿ ನೀಡಿ ಜಯಾ ಆರೋಗ್ಯ ವಿಚಾರಿಸಿದ್ದರು. ಎಷ್ಟೇ ದೊಡ್ಡ ವಿಐಪಿಗಳು ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿದರೂ ಜಯಲಲಿತಾ ಆರೋಗ್ಯದ ಕುರಿತು ನಿಖರ ಹಾಗೂ ಸ್ಪಷ್ಟ ಮಾಹಿತಿಗಳು ಮಾತ್ರ ಹೊರಬಿದ್ದಿಲ್ಲ.

