ಹೊಸದಿಲ್ಲಿ: ದಿಲ್ಲಿ ಮತ್ತು ಮುಂಬಯಿಯಲ್ಲಿ ಮತ್ತೂಮ್ಮೆ ದಾಳಿ ಮಾಡಲು ಉಗ್ರರು ಸಂಚು ಮಾಡಿರುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ಪೊಲೀಸರಿಗೆ ಎಚ್ಚರಿಕೆಯಿತ್ತಿದೆ.
ಇತ್ತೀಚೆಗೆ ಸೆರೆಯಾಗಿರುವ ಇಂಡಿಯನ್ ಮುಜಾಹಿದಿನ್ ಉಗ್ರ ಹೈದರ್ ಅಲಿ ಅಲಿಯಾಸ್ ಬ್ಲ್ಯಾಕ್ ಬ್ಯೂಟಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಈ ಮಾಹಿತಿ ಪಡೆದುಕೊಂಡಿದ್ದಾರೆ. ಹೈದರ್ ಅಲಿ ನೇತೃತ್ವದ ಉಗ್ರರ ತಂಡ ದಿಲ್ಲಿ ಮತ್ತು ಮಹಾರಾಷ್ಟ್ರದ ಹಲವು ಸ್ಥಳಗಳನ್ನು ಸಂಭವನೀಯ ದಾಳಿಗಾಗಿ ಪರಿಶೀಲಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ಕಟ್ಟೆಚ್ಚರದಿಂದ ಇರಲು ಎನ್ಐಎ ಸೂಚಿಸಿದೆ.

ದಿಲ್ಲಿಯ ಲೋಟಸ್ ಟೆಂಪಲ್, ಐತಿಹಾಸಿಕ ಕುತುಬ್ ಮಿನಾರ್, ಬಿಜೆಪಿ ಕೇಂದ್ರ ಕಚೇರಿ ಮತ್ತು ಆನಂದ್ ವಿಹಾರ್ನಲ್ಲಿರುವ ಸ್ವಾಮಿ ವಿವೇಕಾನಂದ ಅಂತರ್ರಾಜ್ಯ ಬಸ್ಸು ನಿಲ್ದಾಣಗಳನ್ನು ಕಳೆದ ಎಪ್ರಿಲ್ನಲ್ಲಿ ಉಗ್ರರು ಸರ್ವೇ ಮಾಡಿದ್ದಾರೆ.
ಅಂತೆಯೇ ಮುಂಬಯಿ ಸಹಿತ ಮಹಾರಾಷ್ಟ್ರದ ಕೆಲವು ನಗರಗಳ ಮೇಲೂ ಉಗ್ರರ ಕಣ್ಣಿದೆ. ಮುಂಬಯಿಯಲ್ಲಿ ಬಾಂಬ್ ಸ್ಫೋಟಿಸುವುದು ಸುಲಭವಾಗಿರುವುದರಿಂದ ಇಂಡಿಯನ್ ಮುಜಾಹಿದಿನ್ ಉಗ್ರರು ಈ ನಗರವನ್ನು ಆಯ್ದುಕೊಳ್ಳುತ್ತಾರೆ. ಹೀಗಾಗಿ ಸಂಭಾವ್ಯ ದಾಳಿಯ ಬಗ್ಗೆ ಕಟ್ಟೆಚ್ಚರದಿಂದಿರಲು ಸಂಬಂಧಿಸಿದ ರಾಜ್ಯಗಳ ಪೊಲೀಸರಿಗೆ ಗುಪ್ತಚರ ಪಡೆ ಪತ್ರ ಬರೆದಿದೆ.
