ಕಲೆಯನ್ನು ಆರಾಧಿಸುವನು ಕಲಾವಿದ, ಕಲೆಯಲ್ಲಿ ಅಹಂಕಾರ ಕಲಾವಿದನನ್ನು ಬೆಳೆಸುವುದಿಲ್ಲ ಎನ್ನುವುದು ಸತ್ಯ. ಕಲೆಯಲ್ಲಿ ಎಷ್ಟೇ ಹೆಸರು ಪಡೆದರು ಕೂಡಾ ಅಹಂಕಾರ ಭಾವ ತೋರದೆ ಬೆಳೆದ ಪ್ರತಿಭೆಯಲ್ಲಿ ರವಿಚಂದ್ರ ಬಿ. ಸಾಲ್ಯಾನ್ ಕೂಡಾ ಒಬ್ಬರು. ಮೂಡುಬಿದಿರೆ ಸಮೀಪದ ವೇಣೂರು ಹಿಂದಿನಿಂದಲೂ ಕೂಡ ಕಲೆ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದಂತಹ ಊರು. ಅಂತಹ ವೇಣೂರು ಗ್ರಾಮಾಂತರ ಕಲಾವಿದರಲ್ಲಿ ಒಬ್ಬರು ಗುಂಡೂರಿ ಗ್ರಾಮದ ‘ರವಿಚಂದ್ರ ಬಿ. ಸಾಲ್ಯಾನ್’. ಕೂಡು ಕುಟುಂಬದಿಂದ ರಂಗಭೂಮಿಗೆ ಆಕರ್ಷಿತಗೊಂಡ ಅಂದಿನ ಸಣ್ಣ ಪ್ರತಿಭೆ. ಇಂದಿಗೆ ಬೆಳೆದು ಹೆಮ್ಮರವಾದ ಪ್ರತಿಭೆ ಎಂದರೂ ತಪ್ಪಾಗಲಾರದು. ಇವರು ನಾಟಕಗಳಲ್ಲಿ ಸ್ತ್ರೀ ವೇಷಧಾರಿಯಾಗಿ ಅಭಿನಯಿಸಿ ಜನಮಾನಸದಲ್ಲಿ ಹೆಸರು ಮಾಡಿದ್ದು ಮಾತ್ರವಲ್ಲದೇ ನಾಟಕ ರಚನೆಯಲ್ಲೂ ಕೂಡಾ ತಮ್ಮ ಚಾಪು ಮೂಡಿಸಿದ್ದಾರೆ.

ಸ್ವ ಪರಿಚಯ ಮತ್ತು ವಿದ್ಯಾಭ್ಯಾಸ:
ಗುಂಡೂರಿ ಗ್ರಾಮದ ಮೇಗನ ಮನೆ ಶ್ರೀಮತಿ ಅಪ್ಪಿ ಹಾಗೂ ದಿ. ಬಾಬು ಪೂಜಾರಿಯವರ ಕೊನೆಯ ಪುತ್ರರಾಗಿ ಜನಿಸಿದ ಇವರು ಮನೆ ಮಂದಿಗೆಲ್ಲಾ ಅಚ್ಚು ಮೆಚ್ಚು. ಹತ್ತನೇ ತರಗತಿಯವರೆಗಿನ ವಿದ್ಯಾಭ್ಯಾಸ ಪಡೆದ ಇವರು ಜೀವನದ ಅನುಭವಗಳಿಂದ ಜ್ಙಾನ ಸಂಪನ್ನತೆಯನ್ನು ಪಡೆದವರು. ಆದರೆ ಅನುಭವವು ಬದುಕನ್ನು ಪಕ್ಷಗೊಳಿಸುತ್ತದೆ ಎಂದು ಇವರನ್ನು ನೋಡಿದರೆ ತಿಳಿಯಬಹುದು.

ರಂಗ ಪ್ರವೇಶ:
ಅನೀರೀಕ್ಷಿತ ಸಂದರ್ಭವು ರಂಗ ಪ್ರವೇಶ ಮಾಡುವಂತೆ ಇವರನ್ನು ಪ್ರೇರೇಪಿಸಿತು. ಖ್ಯಾತ ನಾಟಕ ರಚನೆಕಾರರಾದ ಸಂಜೀವ ದಂಡಕೇರಿಯವರ “ನೆತ್ತೆರ್ದ ಕಾಣಿಕೆ” ನಾಟಕದಲ್ಲಿ ಖಳನಾಯಕನ ಪಾತ್ರದಾರಿ ತನ್ನ ಅಣ್ಣನಾದ ಜಯರಾಜ್ ಬಿ. ಸಾಲ್ಯಾನ್ರವರ ಅಭಿನಯವನ್ನು ವೀಕ್ಷಿಸಲೆಂದು ಹೋದಾಗ, ಆ ನಾಟಕದ ಕಥಾನಾಯಕಿ ಪಾತ್ರದಾರಿ ಅವಿವಾರ್ಯ ಕಾರಣಗಳಿಂದ ಬರದೇ ಇದ್ದಾಗ ನಾಟಕ ತಂಡಕ್ಕೆ ” ಆಪದ್ಬಾಂಧವ”ನಾಗಿ ದಾರಿ ತೋರಿದವರು ಇವರು. ಶ್ರೀ ಲೋಕಯ್ಯ ಸಾಲ್ಯಾನ್ ಇವರ ಪ್ರೋತ್ಸಾಹದಿಂದ ಆ ದಿನ ವೇದಿಕೆ ಏರಿ ಯಶಸ್ವಿ ನಟನೆಯೊಂದಿಗೆ ತಮ್ಮ ಪ್ರತಿಭೆಯನ್ನು ಸಾದರ ಪಡಿಸಿದ ರವಿಚಂದ್ರ ಬಿ. ಸಾಲ್ಯಾನ್ರವರು ಮತ್ತೆ ತಿರುಗಿ ನೋಡದೆ ರಣಗದಲ್ಲಿನ ಈಗಾಗಲೇ ಯಶಸ್ವಿ ಪಯಣ ಬೆಳೆಸುತ್ತಿರುವ ಹಿರಿಮೆ ಇವರದ್ದು. ಸುಮಾರು 25 ವರ್ಷಗಳಿಂದ ತುಳು ನಾಟಕಗಳು ಮಾತ್ರವಲ್ಲದೇ ಕೆಲವು ಕನ್ನಡ ನಾಟಕಗಳಲ್ಲೂ ‘ಸ್ತ್ರೀ‘ ಪಾತ್ರದಲ್ಲಿ ಅಭಿನಯಿಸಿ ಸೈ ಎಣಿಸಿಕೊಂಡಿದ್ದಾರೆ.

ನಾಟಕ ರಚನೆಯಲ್ಲಿ ಒಲವು:
ಬದುಕಿನಲ್ಲಿ ತಾವು ಪಡೆದ ಅನುಭವ ನಾಟಕ ರಚನೆಗೆ ಇವರಿಗೆ ಪ್ರೇರಣೆ ನೀಡಿತು. ಪರಿಣಾಮವಾಗಿ ತಮ್ಮ ಲೇಖನಿಯಿಂದ ಪ್ರೀತಿ ಬೆಳಗಡ್, ಪ್ರೀತಿದ ಪೂ ಬನ, ಕಣ್ಣೀರೊಂಜೇ ಶಾಶ್ವತನಾ..?, ಗುತ್ತುದ ಇಲ್ಲ್, ಬಾವೆ ಬರ್ಪೆರ್, ನೆನಪಾತ್ತಂಡ್, ಕನತ್ತ ಪೂಮಾಲೆ, ಅಮವಾಸ್ಯೆದ ರಾತ್ರೆಡ್, ಆಲ್ ನಾಟಕದಾಲ್, ಗಂಗಾ- ಕಾವೇರಿ, ಸೇವಂತಿಗ್ ಮದ್ಮೆಗೆ, ಬಾಯಿ ಬುಡಿಯೆರ್ ಬಾಬಣ್ಣೆ, ಅಣ್ಣಡ ತಾಂಟೊಚ್ರ್ಚಿ, ಮೂಲು ಏರ್ ಎಡ್ಡೆಂತಿನಕುಲು, ಎದುರುಡು ತೆಲ್ಕೆ-ಪಿರವುಡು ಕೊಲ್ಕೆ, ಮತ್ತು ಇತ್ತೀಚಿಗಿನ ಪುರ್ಸಗ್ ಪುರ್ಸೊತ್ತಿಜ್ಜಿ ಎಂಬ ಅದ್ಭುತ ನಾಟಕಗಳು ಹೊರ ಹೊಮ್ಮಿ ಯಶಸ್ವಿ ಪ್ರದರ್ಶನ ಕಂಡಿದೆ.

ದೊರೆತ ಸನ್ಮಾನ:
ಇವರ ಅಭಿನಯಕ್ಕೆ ಅನೇಕ ಸಂಘ ಸಂಸ್ಥೆಗಳಿಂದ ವಿವಿಧ ಸನ್ಮಾನಗಳನ್ನು ಪಡೆದಿದ್ದು, 2002ರಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬೆ ಪೂಂಜಾಲ್ ಕಟ್ಟೆ ಇವರ ವತಿಯಿಂದ ನಡೆದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ “ನಟಿ ಪ್ರಶಸ್ತಿ “ಇವರ ಪ್ರತಿಭೆಗೆ ಸಿಕ್ಕ ಒಂದು ಅದ್ಭುತ ಗೌರವ.

ಇವರು ಬರೆದಂತಹ ಎಲ್ಲಾ ನಾಟಕಗಳು ಕೂಡಾ ಅದ್ಭುತ ಪ್ರದರ್ಶನಗಳನ್ನು ಕಂಡಿದೆ. ಅದರಲ್ಲೂ ಗುತ್ತುದ ಇಲ್ಲ್, ಗಂಗಾ ಕಾವೇರಿ, ಸೇವಂತಿಗ್ ಮದ್ಮೆಗೆ ಮತ್ತು ಪುರ್ಸಗ್ ಪುರ್ಸೊತ್ತಿಜ್ಜಿ ನಾಟಕ ಇವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿದೆ. ಪ್ರಸ್ತುತವಾಗಿ ಈ ವರ್ಷದ ನಾಟಕ ‘ತೂಂಡ ಗೊತ್ತಾವು’ ಇದರ ತಯಾರಿಯಲ್ಲಿದೆ.

ಅವರ ಸ್ಫೂರ್ತಿ:
ಉದಯ ಕಲಾವಿದರು ಅಲಂಗಾರು-ಕಡಬ, ನಮ್ಮ ಕಾರ್ಲ ತಂಡ ಹಾಗೂ ಸಂಗಮ ಕಲಾವಿದರು ಉಜಿರೆ ತಂಡಗಳಲ್ಲಿ ಕಲಾ ರಂಗಭೂಮಿಯಲ್ಲಿ ಕಲಾಮಾತೆಯ ಸೇವೆ ನಡೆಸುತ್ತಾ ಬಂದಿರುವ ಇವರು ಪ್ರಸ್ತುತ ತಮ್ಮ ಗೆಳೆಯರಾದ ಹೇಮಂತ್ ಕುಮಾರ್ ಭಟ್ ಅವರು ಜೊತೆಗೂಡಿ “ ಫಲ್ಗುಣಿ ಕಲಾ ತಂಡ”ವನ್ನು ಕಟ್ಟಿದ್ದು ಅದರಲ್ಲಿ ಅರಳುವ ಪ್ರತಿಭೆಗಳಿಗೆ ಅದ್ಭುತ ಅವಕಾಶಗಳನ್ನು ನೀಡಿದ್ದಾರೆ. ಇವರು ತಮ್ಮ ಈ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಗೆಳೆಯ ಹೇಮಂತ್ ಕುಮಾರ್ ಭಟ್ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್ನ ಧರಣೇಂದ್ರ ಕುಮಾರ್ ಹಾಗೂ ಅದರ ಎಲ್ಲಾ ಸದಸ್ಯರನ್ನು ಸತತವಾಗಿ ಸ್ಮರಿಸಿ ಕೃತಜ್ಙತೆ ಸಲ್ಲಿಸುತ್ತಿರುವುದು ” ಹತ್ತಿಕೊಂಡು ಬಂದ ಏಣಿಯನ್ನು ಯಾವತ್ತೂ ಮರೆಯಬಾರದು” ಎಂಬ ನುಡಿಯಂತೆ ಉಪಕಾರ ಸ್ಮರಣೇಯ ದ್ಯೋತಕವಾಗಿದೆ.

ಇವರು ನಾಟಕರಂಗದಲ್ಲಿ ಗಳಿಸಿದ ಪ್ರಶಸ್ತಿಗಳು ಹತ್ತು ಹಲವು. ಈ ಪ್ರಶಸ್ತಿಗಳು ತಮ್ಮ ಕಲಾ ಪರಿಪೂರ್ಣತೆಯನ್ನು ಸಾದರ ಪಡಿಸಿದೆ. ಇವರು ಈ ಕಲಾ ಪ್ರಪಂಚದಲ್ಲಿ ಇನ್ನಷ್ಟು ಬೆಳೆಯಬೇಕು, ಎತ್ತರಕ್ಕೇರಬೇಕು ಎಂದು ಸುದ್ದಿ9 ಇದರ ಆಶಯ.

