ವಿಟ್ಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮೋಹನ ಕಾಯರ್ಮಾರ್ `ಸಂಘವು ಸದ್ರಿ ಸಾಲಿನಲ್ಲಿ ರೂಪಾಯಿ 1,71,061.81 ಪೈಸೆ ನಿವ್ವಳ ಲಾಭ ಬಂದಿದ್ದು 20% ಡಿವಿಡೆಂಡ್ ನೀಡಲಾಗುವುದು.’ ಎಂದರು. ಮುಖ್ಯ ಅತಿಥಿ ದ ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜೆ ಆರ್ ಡಿಸೋಜಾ ಹೈನುಗಾರಿಯ ಬಗ್ಗೆ ಮಾಹಿತಿ ನೀಡಿದರು. ನೂತನ ವಿಸ್ತರಣಾಧಿಕಾರಿ ಪ್ರತಿಭಾ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ನಿರ್ದೇಶಕರುಗಳಾದ ಲಿಂಗಪ್ಪ ನಾಯ್ಕ, ಜಯರಾಮ ಬಲ್ಲಾಳ್, ಲೋಕನಾಥ, ಗೋಪಾಲ, ಗಿರಿಜಾ, ರೇವತಿ ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಪುರುಷೋತ್ತಮ ಸ್ವಾಗತಿಸಿ ವರದಿ ಮಂಡಿಸಿದರು. ನಿರ್ದೇಶಕ ಕೃಷ್ಣ ಭಟ್ ವಂದಿಸಿದರು. ಸಂಘದ ಉಪಾಧ್ಯಕ್ಷ ಕೆ ಐ ಸುಬ್ರಹ್ಮಣ್ಯ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು. ತುಳಸಿ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ವಿಶೇಷ ಬಹುಮಾನ ಮತ್ತು ಹಾಲು ಹಾಕುತ್ತಿರುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

