ಮೂಡುಬಿದಿರೆ: ಮಾವ ಮತ್ತು ನಾದಿನಿಯರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತನ್ನ ಮಗಳು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿ ತಾಯಿ ವಾರಿಜ ಶೆಟ್ಟಿ ಮೂಡುಬಿದಿರೆ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ವಿವಾಹಿತೆ ಮೂಡುಮಾರ್ನಾಡಿನ ಸ್ವಾತಿ ಶೆಟ್ಟಿ (25) ಆತ್ಮಹತ್ಯೆ ಮಾಡಿಕೊಂಡಾಕೆ. ಬೆಳ್ತಂಗಡಿ ನಿವಾಸಿಯಾಗಿದ್ದ ಸ್ವಾತಿ ಶೆಟ್ಟಿ ಅವರನ್ನು ಮೂಡುಬಿದಿರೆ ಸಮೀಪದ ಮೂಡುಮಾರ್ನಾಡಿನ ದರ್ಖಾಸು ಮನೆಯ ಬೋಜ ಶೆಟ್ಟಿ ಅವರ ಪುತ್ರ ಶರತ್ಚಂದ್ರ ಎಂಬವರಿಗೆ 2014ರಲ್ಲಿ ಮದುವೆ ಮಾಡಿಕೊಳಾಗಿತ್ತು. ಮದುವೆಯಾದ ಒಂದು ತಿಂಗಳಿನಲ್ಲಿಯೇ ಶರತ್ಚಂದ್ರ ಅವರು ವಿದೇಶಕ್ಕೆ ತೆರಳಿದ್ದರು. ಎಂಎಸ್ಡಬ್ಲ್ಯು ಸ್ನಾತಕೋತರ ಪದವೀಧರೆಯಾಗಿದ್ದ ಸ್ವಾತಿ ಮಂಗಳೂರಿನಲ್ಲಿ ನೌಕರಿಗೆ ಹೋಗಿ ಬರುತ್ತಿದ್ದರು.
ಆಗಸ್ಟ್ 13ರಂದು ಸ್ವಾತಿ ತನ್ನ ತಾಯಿ ಮನೆಗೆ ತೆರಳಿದ್ದು ಈ ಬಗ್ಗೆ ತನ್ನ ತಾಯಿಯ ಬಳಿ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಆಗ ತಾಯಿ ಆಕೆಯನ್ನು ಸಮಧಾನಿಸಿ ಗಂಡನ ಮನೆಗೆ ತೆರಳುವಂತೆ ತಿಳಿಸಿದ್ದರು. ಆದರೆ ಸಂಜೆಯ ವರೆಗೂ ಮತ್ತೆ ಮಗಳು ಕರೆಯನ್ನು ಸ್ವೀಕರಿಸದಿದ್ದಾಗ ಪಕ್ಕದ ಮನೆಯ ಶಶಿ ಎಂಬವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಶಶಿ ಅವರು ಬೋಜ ಶೆಟ್ಟಿ ಅವರ ಮನೆಗೆ ಬಂದು ನೋಡಿದ್ದಾಗ ಸ್ವಾತಿ ಅವರು ವಿಷ ಪದಾರ್ಥ ಸೇವಿಸಿ ಅರೆಪ್ರಜ್ಞಾವಾಸ್ಥೆಯಲ್ಲಿ ಕಂಡು ಬಂದಿದ್ದು ತಕ್ಷಣ ಅವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾದೆ ಆಕೆ ಆ.18ರಂದು ಸಾವನ್ನಪ್ಪಿದ್ದು ಆಗ ಆತ್ಮಹತ್ಯೆ ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ ಇದೀಗ ಸ್ವಾತಿಯ ತಾಯಿ ವಾರಿಜ ಅವರು ಶುಕ್ರವಾರದಂದು ವರದಕ್ಷಿಣೆಗಾಗಿ ಕಿರುಕುಳ ನೀಡಿ ತನ್ನ ಮಗಳು ಸಾವನ್ನಪ್ಪುವಂತೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ.
