ಉಳ್ಳಾಲ: ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಕೆಗೆ ಎಸ್ಸೆಸ್ಸೆಫ್ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ. ಶಿಕ್ಷಣ ಬೆಳವಣಿಗೆಯ ಗುರಿಯನ್ನಿಟ್ಟು ಈ ಕಾರ್ಯ ಮಾಡಲಾಗುತ್ತಿದೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಹೇಳಿದರು.
ಅವರು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ಕುಂಪಲ ಯತೀಂಖಾನ ಬಳಿ ಬುಧವಾರ ನಡೆದ ವಿದ್ಯಾರ್ಥಿ ವೇತನದ ಚೆಕ್ ಬಿಡುಗಡೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿರಾಶ್ರಿತರಾಗಿ ಉಳಿದಿರುವ ಸಮುದಾಯದ ಹಲವು ಕುಟುಂಬಗಳನ್ನು ಹುಡುಕಿ ಅವರಿಗೆ ಆಶ್ರಯ ಮತ್ತು ಬಡವರ ಕಲ್ಯಾಣಕ್ಕಾಗಿ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ 25ಲಕ್ಷ ರೂ. ವ್ಯಯ್ಯ ಮಾಡಿದೆ. ಅಲ್ಲದೇ ವಿಧವೆಯರನ್ನು, ನಿರ್ಗತಿಕರನ್ನು ಪತ್ತೆ ಹಚ್ಚಿ ಅವರ ಮಾಸಿಕ ಖರ್ಚಿಗಾಗಿ ದಿನಬಳಕೆಯ ವಸ್ತುಗಳನ್ನು ಮತ್ತು ನಗದು ಹಣವನ್ನು ವಿತರಿಸುವಲ್ಲಿ ಈ ಸಂಘಟನೆ ಯಶಸ್ವಿ ಕಾರ್ಯ ಮಾಡಿದೆ. ಇದೀಗ ಶಿಕ್ಷಣದಿಂದ ಹಿಂದೇಟು ಹಾಕುತ್ತಿರುವ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಶಿಕ್ಷಣ ಮುಂದುವರಿಕೆಗೆ ಒತ್ತು ನೀಡಲಾಗಿದೆ. ಇಂಹತ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಿ ಸಹಕರಿಸಬೇಕೆಂದು ಕರೆ ನೀಡಿದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ನ ಅಧ್ಯಕ್ಷ ಇಲ್ಯಾಸ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ನ ಗೌರವಾಧ್ಯಕ್ಷ ಹಾಜಿ ಮಹಮ್ಮದ್ ಇಕ್ಬಾಲ್ ಕುಂಪಲ, ಪ್ರಚಾರ ಸಮಿತಿಯ ನಿರ್ದೇಶಕ ಹಾಜಿ ಉಮರಬ್ಬ ಮೋಂಟುಗೋಳಿ, ಕುಂಪಲ ನೂರಾನಿ ಮಸೀದಿಯ ಮುದರ್ರಿಸ್ ಅಬ್ದುಲ್ರಹ್ಮಾನ್ ಅಹ್ಸನಿ ಮೊದಲಾದವರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ನ ಅಧ್ಯಕ್ಷ ಅಲ್ತಾಫ್ ಕುಂಪಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಭಾತಿಷ ಮಂಚಿಲ ಧನ್ಯವಾದ ಸಮರ್ಪಿಸಿದರು.

