ನವದೆಹಲಿ: ಮೂರು ದಶಕಗಳ ಬಳಿಕ, ಪ್ರತ್ಯೇಕ ಪಂಜಾಬೀ ರಾಷ್ಟ್ರ “ಖಾಲಿಸ್ತಾನ”ಕ್ಕಾಗಿ ಕೂಗು ಕೇಳಿಬಂದಿದೆ. ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರದ ರಚನೆಯಾಗಬೇಕೆಂದು ಅಮೃತಸರ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸಿಮ್ರಾನ್’ಜೀತ್ ಸಿಂಗ್ ಮಾನ್ ಒತ್ತಾಯಿಸಿದ್ದಾರೆ. ನಿನ್ನೆ ನಡೆದ 30ನೇ ಆಪರೇಶನ್ ಬ್ಲೂಸ್ಟಾರ್ ದುರಂತದ ಸ್ಮರಣಾ ಕಾರ್ಯಕ್ರಮದ ವೇಳೆ ಮಾನ್ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ನಿನ್ನೆ ಎರಡು ಸಿಖ್ ಗುಂಪುಗಳ ನಡುವಿನ ಹೊಡೆದಾಟದ ಘಟನೆ ಹಾಗೂ ಈ ವಿವಾದಿತ ಹೇಳಿಕೆಯು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.
ಬಫರ್
ರಾಷ್ಟ್ರ…
ಒಂದು ವೇಳೆ ಖಾಲಿಸ್ತಾನ ರಾಷ್ಟ್ರ ರಚನೆಯಾದಲ್ಲಿ ಅದು ಭಾರತ, ಪಾಕಿಸ್ತಾನ ಮತ್ತು ಪಾಕಿಸ್ತಾನ ದೇಶಗಳ ನಡುವೆ ಮಧ್ಯಸ್ಥ ರಾಷ್ಟ್ರವಾಗಲಿದೆ. ಖಾಲಿಸ್ತಾನದಲ್ಲಿ ಹಿಂದೂ, ಸಿಖ್, ಮುಸ್ಲಿಮ್ ಸೇರಿದಂತೆ ಎಲ್ಲಾ ಸಮುದಾಯದವರೂ ಶಾಂತಿ ಸಹಬಾಳ್ವೆಯಿಂದ ಬದುಕಲಿದ್ದಾರೆ. ಖಾಲಿಸ್ತಾನವು ಪರಮಾಣುಮುಕ್ತ ಹಾಗೂ ಯುದ್ಧಮುಕ್ತ ರಾಷ್ಟ್ರವಾಗಲಿದೆ. ಖಾಲಿಸ್ತಾನದ ರೂಪುರೇಖೆಯನ್ನ ಶೀಘ್ರದಲ್ಲೇ ಸಿದ್ಧಗೊಳಿಸುತ್ತೇವೆ ಎಂದು ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸಿಮ್ರಾನ್’ಜೀತ್ ಸಿಂಗ್ ಮಾನ್ ಹೇಳಿದ್ದಾರೆ…
ಹೇಗಿರುತ್ತೆ ಖಾಲಿಸ್ತಾನ..?
ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಕಾಲದಲ್ಲೇ ಖಾಲಿಸ್ತಾನದ ಪರಿಕಲ್ಪನೆಯಾಗಿತ್ತು. ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವಾಗಿರುವಾಗ ಸಿಖರು ಅನಾಥರಾಗಿಬಿಡಬಹುದೆಂಬ ಭಯ ಮತ್ತು ಆತಂಕದಲ್ಲಿ ಪ್ರತ್ಯೇಕ ಪಂಜಾಬ್ ರಾಷ್ಟ್ರಕ್ಕಾಗಿ ಕೂಗು ಕೇಳಿಬಂದಿತ್ತು. ಭಾರತ ಮತ್ತು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯಗಳನ್ನ ಒಂದುಗೂಡಿಸಿ ಖಾಲಿಸ್ತಾನ ರಾಷ್ಟ್ರ ನಿರ್ಮಾಣವಾಗಬೇಕೆಂಬ ಉದ್ದೇಶವಿದೆ.
ಖಾಲಿಸ್ತಾನದ ಕೂಗು ಬಲ ಪಡೆದುಕೊಂಡಿದ್ದು ಎಂಬತ್ತರ ದಶಕದಲ್ಲಿ. ಕಾಶ್ಮೀರ ಉಗ್ರಗಾಮಿಗಳ ರೀತಿಯಷ್ಟೇ ಗಂಭೀರವಾಗಿ ಖಾಲಿಸ್ತಾನ ಹೋರಾಟಗಾರರು ಭಾರತ ಸರ್ಕಾರಕ್ಕೆ ತಲೆನೋವಾಗಿದ್ದರು. ಆ ಗಳಿಗೆಯಲ್ಲೇ ಆಪರೇಷನ್ ಬ್ಲೂಸ್ಟಾರ್ ನಡೆದದ್ದು… ಆ ಬಳಿಕ, ಇಂದಿರಾ ಗಾಂಧಿ ಹತ್ಯೆಯಾಯಿತು.. ಬಳಿಕ ಸಿಖ್ಖರ ನರಮೇಧವಾಯಿತು… ಪೊಲೀಸರು ಬಲವಂತವಾಗಿ ಸಿಖ್ಖರ ಹೋರಾಟವನ್ನ ಹತ್ತಿಕ್ಕಿದರು. ಪಂಜಾಬ್’ನಲ್ಲಿ ಖಾಯಂ ಆಗಿ ಶಾಂತಿ ನೆಲಸಿತು ಎಂದುಕೊಳ್ಳುವಷ್ಟರಲ್ಲಿ ಈಗ ಮತ್ತೆ ಖಾಲಿಸ್ತಾನದ ಕಿಡಿ ಹೊತ್ತಿದೆ.
