ಬಜ್ಪೆ: ಯುವಕರಿಬ್ಬರು ನೀರುಪಾಲಾದ ಘಟನೆ ಮರವೂರು ಡ್ಯಾಂ ಬಳಿ ಮಂಗಳವಾರ ಸಂಜೆಯ ವೇಳೆ ಸಂಭವಿಸಿದೆ. ನೀರುಪಾಲಾದ ಯುವಕರನ್ನು ಪಂಜಿಮೊಗರು ನಿವಾಸಿಗಳಾದ ಸಹೋದರ ಸಂಬಂಧಿ ಅವಿನಾಶ್ ಹಾಗೂ ಜೇಸನ್ ಎಂದು 25 ವರ್ಷದ ಆಸುಪಾಸಿನವರೆಂದು ತಿಳಿದುಬಂದಿದೆ. ಭೀಕರ ಮಳೆ ಸಂಭವಿಸಿರುವುದರಿಂದ ಪಲ್ಗುಣಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ನೀರುಪಾಲಾದವರನ್ನು ಹುಡುಕಲು ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ.


ಘಟನೆಯ ವಿವರ: ನಿನ್ನೆ ಸಂಜೆ ಜೇಸನ್ ಹಾಗೂ ಅವಿನಾಶ್ ತನ್ನ ಗೆಳೆಯರೊಡನೆ ಮರವೂರು ಸೇತುವೆ ಬಳಿ ಕುಳಿತುಕೊಂಡು ಮಾತುಕತೆಗೆ ತೊಡಗಿದ್ದರೆನ್ನಲಾಗಿದೆ. ಇವರಲ್ಲಿ ಒಟ್ಟು 8 ಮಂದಿ ಯುವಕರಿದ್ದರೆಂದು ತಿಳಿದುಬಂದಿದೆ. ಮಾತುಕತೆ ನಡೆಸಿದ ಬಳಿಕ ಬಳಿಕ ಸಂಜೆಯ ವೇಳೆ ಒಬ್ಬರನ್ನೊಬ್ಬರು ಅವರವರ ಮನೆಗೆ ಕರೆದುಕೊಂಡು ಹೋಗಲೆಂದು ಗೆಳೆಯರ ಪೈಕಿ ಒಬ್ಬರನ್ನೇ ಬೈಕ್ನಲ್ಲಿ ಮನೆಗೆ ಕರೆದುಕೊಂಡು ಬಿಡುತ್ತಿದ್ದರು.
ಈ ವೇಳೆ ಜೇಸನ್ ಹಾಗೂ ಅವಿನಾಶ್ ಪೈಕಿ ಒಬ್ಬಾತ ಮುಖ ತೊಳೆಯಲೆಂದು ನೀರಿಗೆ ಇಳಿದಿದ್ದು ತಕ್ಷಣ ಆಯತಪ್ಪಿ ಬಿದ್ದಿದ್ದಾನೆನ್ನಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡ ಆತನನ್ನು ಮತ್ತೊಬ್ಬ ಕೂಡಾ ನೀರಿಗೆ ಹಾರಿದ್ದು ಈ ವೇಳೆ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿಕೊಂಡು ಕೊಚ್ಚಿಕೊಂಡು ಹೋಗಿದ್ದಾನೆ.
ನೀರಿಗೆ ಬಿದ್ದ ಗೆಳೆಯರನ್ನು ಅಲ್ಲಿ ಉಳಿದಿದ್ದ ಯುವಕರು ರಕ್ಷಿಸಲು ಯತ್ನಿಸಿದ್ದಾರೆ. ಅವರನ್ನು ಮೇಲಕ್ಕೆ ಕರೆದುಕೊಂಡು ಬರಲು ಮರದ ಗೆಲ್ಲುಗಳನ್ನೆಲ್ಲಾ ನೀರಿಗೆ ಹಾಕಿದರೂ ಪ್ರಯೋಜನವಾಗದೆ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾವೂರು ಹಾಗೂ ಬಜ್ಪೆ ಪೊಲೀಸರು ಜಂಟಿಯಾಗಿ ಸ್ಥಳೀಯರ ಜೊತೆಗೂಡಿ ಕಾರ್ಯಾಚರಣೆ ನಡೆಸಿದರಾದರೂ ಇಬ್ಬರನ್ನೂ ಮೇಲಕ್ಕೆತ್ತಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರನ್ನು ಕರೆಸಲಾಗಿದ್ದು, ಕಾರ್ಯಾಚರಣೆ ನಡೆಸಲು ಸಾಧ್ಯವಾಗದೇ ಇರುವುದರಿಂದ ಮರುದಿನಕ್ಕೆ ಮುಂದೂಡಲಾಗಿದೆ.
ಕಳೆದ ತಿಂಗಳಿನಿಂದ ಭೀಕರ ಮಳೆಯಾಗುತ್ತಿರುವುದರಿಂದ ಪಲ್ಗುನಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ತೊಡಕಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
