ಬಂಟ್ವಾಳ:ತಾಲ್ಲೂಕಿನ ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ರಿಕ್ಷಾ ಉರುಳಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಮೃತರನ್ನು ಸ್ಥಳೀಯ ತುಂಬೆ ಸಮೀಪದ ರೊಟ್ಟಿಗುಡ್ಡೆ ನಿವಾಸಿ ಚಂದ್ರಶೇಖರ ಎಂದು ಗುರುತಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಇವರು ಸುಮಾರು ಮೂರೂವರೆ ಗಂಟೆಗೆ ಎದ್ದು ಮಂಗಳೂರಿಗೆ ತೆರಳಿ ರಿಕ್ಷಾದಲ್ಲಿ ದುಡಿದು ಬಳಿಕ ಸಂಜೆ ವಾಪಾಸಾಗುತ್ತಿದ್ದರು ಎನ್ನಲಾಗಿದೆ. ಇದೇ ರೀತಿ ಗುರುವಾರ ಮುಂಜಾನೆ ಎಂದಿನಂತೆ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಕುಮ್ಡೇಲು ಇಳಿಜಾರು ರಸ್ತೆಯಲ್ಲಿ ಇವರ ನಿಯಂತ್ರಣ ತಪ್ಪಿ ರಿಕ್ಷಾ ಉರುಳಿ ಬಿದ್ದಾಗ ಅವರು ಕೂಡಾ ಅದರ ಅಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು ಗಮನಿಸಿ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
