ಕೈಕಂಬ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಡೂರು ಸಮೀಪದ ಕಾಂಜಿಲಕೋಡಿ-ನೂಯಿ ಎಂಬಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಬಂಗ್ಲಗುಡ್ಡೆ ನಿವಾಸಿ ನಿಯಾಝ್(26) ಎಂದು ಗುರುತಿಸಲಾಗಿದೆ. ಘಟನೆಯಿಂದ ಉದ್ರಿಕ್ತರಾದ ಜನರು ಲಾರಿ ಚಾಲಕನ ವಿರುದ್ಧ ಪ್ರತಿಭಟನೆ ಸಲ್ಲಿಸಿದ ಘಟನೆಯೂ ನಡೆಯಿತು.
ಘಟನೆಯ ವಿವರ: ಕೈಕಂಬ ಕಡೆಯಿಂದ ಬರುತ್ತಿದ್ದ ಲಾರಿ ನೂಯಿ ಎಂಬಲ್ಲಿನ ರಸ್ತೆಯಲ್ಲಿ ಜೆಸಿಬಿಯನ್ನು ಓವರ್ಟೇಕ್ ಮಾಡುವ ಯತ್ನದಲ್ಲಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ನಿಯಾಝ್ ಅವರ ಬೈಕ್ಗೆ ಲಾರಿಯ ಬದಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸ್ಕಿಡ್ ಆಗಿ ನಿಯಾಝ್ ರಸ್ತೆಯ ಮೇಲೆ ಬಿದ್ದರೆನ್ನಲಾಗಿದೆ.

ತಲೆಯಲ್ಲಿ ಹೆಲ್ಮೆಟ್ ಇಲ್ಲದ ಕಾರಣ ತಲೆಗೆ ನೆಲ ಬಲವಾಗಿ ಬಡಿದ ಪರಿಣಾಮ ನಿಯಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬೈಕ್ನ ಸಹಸವಾರನಿಗೆ ಅಲ್ಪ ಸ್ವಲ್ಪ ಗಾಯಗಲಾಗಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಲ್ಲದೆ ಬೈಕ್ಗೂ ಯಾವುದೇ ಹಾನಿ ಸಂಭವಿಸಿಲ್ಲ.
ಸ್ಥಳೀಯರ ಸಹಕಾರದಿಂದ ಬಜ್ಪೆ ಪೊಲೀಸರು ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಂದ ಆಕ್ರೋಶ:
ಬೈಕ್ ಸವಾರನ ಸಾವಿಗೆ ಕಾರಣನಾದ ಯಮದೂತ ಲಾರಿ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಲಾರಿ ಘಟನೆ ನಡೆದ ಬಳಿಕ ಸ್ಥಳದಿಂದ ಪರಾರಿಯಾಗಿತ್ತು. ಇದರಿಂದ ಆಕ್ರೋಶಿತರಾದ ಜನರು ಲಾರಿಯನ್ನು ಕರೆಸಿ ಇದರ ಚಾಲಕನನ್ನು ತಮ್ಮ ಮುಂದೆ ನಿಲ್ಲಿಸುವಂತೆ ಪೊಲೀಸರ ಮುಂದೆ ಪಟ್ಟು ಹಿಡಿದರು. ಆದರೆ ಇದಕ್ಕೆ ಒಪ್ಪದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾಗಿ ಹೇಳಿದರು. ಆದರೆ ಸಾರ್ವಜನಿಕರ ನಿಲ್ಲದ ಆಕ್ರೋಶವನ್ನು ಮನಗಂಡ ಪೊಲೀಸರು ಘಟನೆಗೆ ಕಾರಣವಾದ ಲಾರಿಯನ್ನು ಬೇರೆ ಚಾಲಕನ ಮುಖಾಂತರ ಸ್ಥಳದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಆಕ್ರೋಶ ಮುಗಿಲುಮುಟ್ಟಿದೆ. ಪೊಲೀಸರು ಲಾರಿ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಹೇಳಿದ್ದರಿಂದ ಕೊನೆಗೂ ಸಾರ್ವಜನಿಕರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.





