ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ಗುಡ್ಡದಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.ಮೂಲತಃ ಸವಣೂರು ಪುಣಚ್ಚಪಾಡಿಯ ಗಿರೀಶ್ ರೈ ಅವರ ಪುತ್ರಿ ಚೈತ್ರ(26) ಅವರ ಮೃತದೇಹವೆಂದು ಗುರುತಿಸಲಾಗಿದೆ.
ಚೈತ್ರ ಅವರಿಗೆ ಮೂಲ್ಕಿಯ ಚೇತನ್ ಅವರೊಂದಿಗೆ 8 ತಿಂಗಳ ಹಿಂದೆ ವಿವಾಹವಾಗಿತ್ತು ಎನ್ನಲಾಗಿದೆ. ಉಪನ್ಯಾಸಕಿಯಾಗಿದ್ದ ಅವರು ಮಂಗಳೂರು ಜಲ್ಲಿಗುಡ್ಡೆಯ ಮಾವನ ಮನೆಯಲ್ಲಿ ವಾಸ್ತವ್ಯವಿದ್ದರವಿವಾರ ಕಾರಿಂಜೇಶ್ವರ ದೇವಸ್ಥಾನಕ್ಕೆ ಅವರು ಆಗಮಿಸಿದ್ದು ಸೋಮವಾರ ಮಧ್ಯಾಹ್ನ ಪಾರ್ವತಿ ದೇವಸ್ಥಾನದ ಬಳಿ ಇರುವ ದೈವೀವನದ ಬಳಿ ಅವರ ಬ್ಯಾಗ್ ಪತ್ತೆಯಾಗಿತ್ತು. ಅದನ್ನು ಕಂಡು ಯಾತ್ರಾರ್ಥಿಗಳು ದೇವಸ್ಥಾನದ ಕಚೇರಿಗೆ ನೀಡಿದ್ದರು. ಅದರಲ್ಲಿದ್ದ ಮೊಬೈಲ್ ಮೂಲಕ ಚೈತ್ರ ಅವರ ಸಂಬಂಕರಿಗೆ ಮಾಹಿತಿ ನೀಡಲಾಗಿತ್ತು. ರವಿವಾರ ಅವರು ನಾಪತ್ತೆಯಾದ ಬಗ್ಗೆ ಮಂಗಳೂರು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮಂಗಳವಾರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಸ್ಥಳೀಯರು ಹಾಗೂ ಚೈತ್ರ ಅವರ ಮನೆಯವರು ಹುಡುಕಾಟ ನಡೆಸಿದಾಗ ದೇವಸ್ಥಾನದ ಪಕ್ಕದ ಬಂಡೆಯ ಇಳಿಜಾರು ಪ್ರದೇಶದಲ್ಲಿ ಚೂಡಿದಾರ ಶಾಲು ಉಪಯೋಗಿಸಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
