ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕದಲ್ಲಿ ಸುಮಾರು 100ಅಡಿ ಎತ್ತರದ ಅತ್ಯಂತ ಸುಂದರವಾಗಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರವು ಏ.21ರಂದು ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ ಸ್ವಾಮೀಜಿಗಳ ದಿವ್ಯ ಹಸ್ತದಿಂದ ಸಪರಿವಾರ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

ಏ. 19ರಿಂದ 23ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 19 ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಫಲಾನ್ಯಾಸ ಪ್ರಾರ್ಥನೆ, 10.30ಕ್ಕೆ ಧ್ವಜಾರೋಹಣ, ಉಗ್ರಾಣ ಮುಹೂರ್ತ-ಪೂಜೆ, ವಂದೇ ಮಾತರಂ, ರಾಮನಾಮ ತಾರಕ ಜಪ ನಡೆಯಲಿದೆ. ಸಂಜೆ 7.00ಕ್ಕೆ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಪ್ರಾಸಾದ ಶುದ್ಧಿ, ಬಿಂಬ ಶುದ್ಧಿ, ರಾಕ್ಷೊಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಭೂವರಾಹ ಹೋಮ, ಸುದರ್ಶನ ಹೋಮ, ಬಿಂಬ ಜಲಾಧಿವಾಸ ನಡೆಯಲಿದೆ, ಲೋಕಾರ್ಪಣೆಯ ಪೂರ್ವಬಾವಿಯಾಗಿ ಇಂದು ಸಂಜೆ 4ಕ್ಕೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆಯನ್ನು ಮೆಲ್ಕಾರು ಜಂಕ್ಷನ್ ಬಳಿಯಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಶ್ರೀರಾಮ ಮಂದಿರಕ್ಕೆ ತರಲಾಯಿತು.
ಮೆಲ್ಕಾರ್ ಜಂಕ್ಷನಲ್ಲಿ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಅವರ ದಿವ್ಯ ಹಸ್ತದಲ್ಲಿ ತೆಂಗಿನಕಾಯಿ ಹೊಡೆಯುವ ಮೂಲಕ ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್, ಕಲ್ಲಡ್ಕ , ಕಮಲಾ ಪ್ರಭಾಕರ ಭಟ್, ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಸುಲೋಚನಾ ಜಿಕೆ ಭಟ್ಟ್, ಪದ್ಮನಾಭ ಕೊಟ್ಟಾರಿ ಮತ್ತಿತರ ಗಣ್ಯರು ಪಾಲ್ಗೊಂಡರು.





