ಬಂಟ್ವಾಳ: ತಾಲೂಕಿನ ಮೂಡುಪಡ್ಕೋಡಿ ಎಂಬಲ್ಲಿ ಈಗಾಗಲೇ ಸ್ಥಳೀಯ ಶಾಸಕರ ನಿಧಿಯಿಂದ ನಿರ್ಮಿಸಲಾದ ಸಮುದಾಯ ಭವನದ ಪಕ್ಕದಲ್ಲಿ ತಡೆಗೋಡೆ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಮಂಜೂರಾಗಿದೆ ಎನ್ನಲಾದ ಎರಡು ಲಕ್ಷ ರೂಪಾಯಿಯ ಅನುದಾನ ಸ್ಪಷ್ಟ ಮಾಹಿತಿ ನೀಡುವಲ್ಲಿ ಇರ್ವತ್ತೂರು ಗ್ರಾಮ ಪಂಚಾಯತ್ ಹಿಂದೇಟು ಹಾಕುತ್ತಿದೆ ಎಂದು ಪಂಚೋಡಿ ನೇರಳಕಟ್ಟೆ ಕರ್ನಾಟಕ ದಲಿತ ಸಂಘರ್ಷ ಸಂಘಟನಾ ಸಮಿತಿಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಬುಧವಾರ ಬಿ.ಸಿ.ರೋಡ್ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸುಂದರ್ ಸಾಲ್ಯಾನ್ ಹಾಗೂ ಮುಖಂಡ ಶೇಕರ್ ಸಾಲ್ಯಾನ್ ಅವರು 2015ರಲ್ಲಿ ಈ ಅನುದಾನ ಮಂಜೂರಾತಿ ಆಗಿದೆ ಎಂದು ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಎಂಜಿನಿಯರ್ರೊಬ್ಬರು ಮಾಹಿತಿ ನೀಡಿದ್ದರು ಎಂದು ತಿಳಿಸಿದರು. ಈ ಅನುದಾನದಲ್ಲಿ ಸಮುದಾಯ ಭವನದ ಪಕ್ಕ ತಡೆಗೋಡೆ, ಶೌಚಾಲಯ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳವಂತೆ ಇರ್ವತ್ತೂರು ಗ್ರಾಪಂ ಪಿಡಿಒ ಹಾಗೂ ಎಂಜಿನಿಯರ್ ಅವರಲ್ಲಿ ಸಮಿತಿಯ ವತಿಯಿಂದ ಕೇಳಿಕೊಳ್ಳಲಾಗಿತ್ತು. ಆದರೆ, ಇವರು ಈ ಅನುದಾನದ ಪೈಕಿ 40 ಸಾವಿರ ತೆರಿಗೆ, ಸಮುದಾಯ ಭವನದ ನಿರ್ಮಾಣದಲ್ಲಿ ಬಾಕಿಯಾಗಿರುವ 1 ಲಕ್ಷ ರೂ. ಅನ್ನು ಪಾವತಿಸಲಾಗಿದೆ. ಇನ್ನು ಇದರಲ್ಲಿ ಕೇವಲ 60 ಸಾವಿರ ರೂ. ಅಷ್ಟೇ ಉಳಿದಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಈ 60 ಸಾವಿರದಲ್ಲಿ ಸಮುದಾಯ ಭವನಕ್ಕೆ ಟೈಲ್ಸ್ ಹಾಕಲು ಅಧಿಕಾರಿಗಳು ಮುಂದಾಗಿದ್ದು, ಇದನ್ನು ಸಮಿತಿ ವತಿಯಿಂದ ತಡೆ ಹಿಡಿಯಲಾಗಿದೆ ಎಂದು ಶೇಕರ್ ಸಾಲ್ಯಾನ್ ತಿಳಿಸಿದ್ದಾರೆ. ಬಿಡುಗಡೆಯಾಗಿದೆ ಎಂದು ಗ್ರಾಮ ಸಭೆಯಲ್ಲೇ ಘೋಷಿಸಿದ ಪೂರ್ತಿ 2 ಲಕ್ಷ ರೂ.ವಿನಲ್ಲಿ ಸಮಿತಿ ಈಗಾಗಲೇ ಸಲ್ಲಿಸಿದ್ದ ಮನವಿಯಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಇದೀಗ ಪಂಚಾಯತ್ ಪಿಡಿಒ ಈ ಅನುದಾನದ ಬಗ್ಗೆ ಕೇಳಲಾದ ಮಾಹಿತಿಗೆ ಅಸ್ಪಷ್ಟವಾದ ಉತ್ತರವನ್ನು ನೀಡಿರುವುದರಿಂದ ಮಂಜೂರಾದ 2 ಲಕ್ಷ ರೂ. ಅನುದಾನವನ್ನು ಪಿಡಿಒ, ಎಂಜಿನಿಯರ್ ಹಾಗೂ ಸದಸ್ಯರು ಅವ್ಯವಹಾರ ನಡೆಸಿರಬೇಕೆಂದು ಅನುಮಾನವನ್ನು ಅವರು ವ್ಯಕ್ತಪಡಿಸಿದರು.
ಸಮಿತಿ ಪದಾಧಿಕಾರಿಗಳಾದ ಕೆ.ಎ.ಸಾಲು, ಪ್ರಶಾಂತ್ ಜೈನ್, ಸುದೀಂದ್ರ ಉಪಸ್ಥಿತರಿದ್ದರು.
