ಕೈಕಂಬ: ಅಕ್ರಮ ಗೋಸಾಗಾಟ ಮಾಡಿದ ದನವನ್ನು ನಾವು ಖಂಡಿತಾ ಹಿಡಿಯುತ್ತೇವೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ದನ ಹಿಡಿದರೆ ಪೊಲೀಸರ ಕೈಯಿಂದ ಪೆಟ್ಟು, ಮೂರು ತಿಂಗಳು ಜೈಲು, ನಾಲ್ಕು ವರ್ಷ ಕೋರ್ಟು ಅಲೆದರೂ ಪರವಾಗಿಲ್ಲ. ಯಾಕೆಂದರೆ ಗೋವು ನಮ್ಮ ತಾಯಿ. ಮುಂದಿನ ಪೀಳಿಗೆ ಗೋವನ್ನು ಜೀವಂತವಾಗಿ ನೋಡಬೇಕೆಂದಿದ್ದರೆ ಝೂ ಅಥವಾ ಪಿಲಿಕುಳದಂತಹ ನಿಸರ್ಗಧಾಮದಲ್ಲಿ ನೋಡಬೇಕಾದೀತು. ಏನೇ ಆದರೂ ಅಕ್ರಮ ಗೋಸಾಟವನ್ನು ತಡೆದೇ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಘಂಟಾಘೋಷವಾಗಿ ಸಾರಿದ್ದಾರೆ.
ಅವರು ಫೆ. ಆರರಂದು ರಾತ್ರಿ ಗುರುಪುರ ಕೈಕಂಬ ಸಮೀಪದ ಕಾಜಿಲದ ಕೋರ್ದಬ್ಬು ದೇವಸ್ಥಾನದ ಸಮೀಪ ವಿಹಿಂಪ, ಬಜರಂಗದಳ, ಮಾತೃಮಂಡಳಿ ಹಾಗೂ ದುರ್ಗಾವಾಹಿನಿ ಮಳಲಿ-ಕಾಜಿಲ ವತಿಯಿಂದ ನಡೆದ ಭಜರಂಗಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇಂದು ಹಸುವನ್ನು ಸಾಕುವುದು ದುಸ್ತರವಾಗಿ ಪರಿಣಮಿಸಿದೆ. ಇಂದು ನಾವು ಗೋವನ್ನು ರಕ್ಷಿಸದೇ ಹೋದರೆ ಮುಂದಿನ 25 ವರ್ಷದ ಬಳಿಕ ಗೋವನ್ನು ಚಿತ್ರದಲ್ಲಿ ನೋಡುವ ಪ್ರಮೇಯ ಒದಗಬಹುದು ಆದ್ದರಿಂದ ಅಕ್ರಮ ಗೋಸಾಟವನ್ನು ನಾವು ತಡೆಯುತ್ತೇವೆ ಎಂದು ಜಗದೀಶ ಶೇಣವ ನುಡಿದಿದ್ದಾರೆ.
ಬಜರಂಗಿಗಳು ಪೆಟ್ಟು ತಿನ್ನುವುದು ಸಮಾಜಕ್ಕಾಗಿ:
ತುಂಬಾ ಮಂದಿ ವಿಹಿಂಪ, ಆರೆಸ್ಸೆಸ್ ಆದ್ರೆ ಆಗ್ಬಹುದು ಅನ್ತಾರೆ, ಆದರೆ ಬಜರಂಗಿಗಳು ಆಗ್ಲಿಕ್ಕಿಲ್ಲ. ಯಾಕೆಂದರೆ ಬಜರಂಗಿಗಳಿಗೆ ಪೆಟ್ಟು ಮಾಡುವುದೊಂದೇ ಕೆಲಸ. ಶಾಲು ಹಾಕಿ ತಿರುಗುವುದು, ಪೆಟ್ಟು ತಿನ್ನುವುದು ಎಲ್ಲವೂ ತನ್ನ ಸ್ವಂತಕ್ಕಾಗಿ ಅಲ್ಲ. ಎಲ್ಲಾ ಸಮಾಜಕ್ಕಾಗಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗಿಗಳು ತನ್ನ ಸ್ವಂತ ಹಿತಾಸಕ್ತಿಗಾಗಿ ಪೆಟ್ಟು ಮಾಡಿದ ಉದಾಹರಣೆಯೇ ಇಲ್ಲ. ಏನು ಮಾಡಿದ್ರೂ ಅದು ಸಮಾಜಕ್ಕಾಗಿ. ಕೆಲವರು ಕೇಳ್ಬಹುದು ಸಮಾಜ ನಿಮಗೆ ಮಾತ್ರನಾ ಅಂತ? ನೀನೇ ಯಾಕೆ ಜೀವ ತೆಗೆಯುದು ಎಂದು ಕೇಳಬಹುದು. ಇದಕ್ಕೆ ನನ್ನ ಉತ್ತರ ಏನೆಂದರೆ, ನಮ್ಮ ದೇಶವನ್ನು 800 ವರ್ಷ ಮುಸ್ಲಿಮರು ಆಳಿದರು, 200 ವರ್ಷ ಕ್ರೈಸ್ತರು ಆಳಿದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕಿದ್ದರೆ ಈ ದೇಶದ ಆರು ಲಕ್ಷ ಕಾರ್ಯಕರ್ತರು ಯಾವುದೇ ಆಕಾಂಕ್ಷೆ ಇಲ್ಲದೆ ದೇಶಕ್ಕಾಗಿ ಹೋರಾಡಿ ಜೀವತೆತ್ತಿದ್ದಾರೆ. ಒಂದು ವೇಳೆ ಅಷ್ಟು ಮಂದಿ ಸುಮ್ಮನಿರುತ್ತಿದ್ದರೆ ಇಂದು ಭಾರತ ಸ್ವತಂತ್ರ್ಯಗೊಳ್ಳುತ್ತಿತ್ತೇ ? ಆದ್ದರಿಂದ ಹಿಂದೂಗಳು ಮುಂದೆಯೂ ಬದುಕಬೇಕಿದ್ದರೆ ಈ ಹಿಂದುತ್ವಕ್ಕಾಗಿ ಹೋರಾಟ ಮಾಡುವ ಇಂಥಾ ಯುವಕರು ಬೇಕೇ ಬೇಕು ಎಂದು ನಾನು ಎದೆ ತಟ್ಟಿ ಹೇಳುತ್ತೇನೆ ಎಂದು ಹೇಳಿದರು.
ಪೊಣ್ಣು ಏರ್ನೊಟ್ಟಿಗೆಲಾ ತಿರ್ಗ್ಂಡ
ನಿಕ್ಕ್ ದಾನೆ ಎನ್ನುವವರಿಗೆ ಶೇಣವ ನೀಡಿದ ಉತ್ತರ:
ಅನೇಕ ಮಂದಿ ನಮ್ಮಲ್ಲಿ ಯಾವ ಹೆಣ್ಣು ಯಾರೊಂದಿಗಾದರೂ ತಿರುಗಾಡಿದರೆ ನಿನಗೇನು, ಅವರೇನು ನಿನ್ನ ಅಕ್ಕ-ತಂಗಿಯಾ ಅಂತ ಕೇಳ್ತಾರೆ. ಯಾಕೆಂದರೆ ಬೇರೆ ಮನೆಯ ಹುಡುಗಿ ಹಾಳಾದ್ರೂ ಆಕೆ ತನ್ನ ಸಹೋದರಿ ಎಂಬ ಭಾವನೆಯಿಂದ ಬಜರಂಗಿಗಳು ಹೋರಾಟ ಮಾಡುತ್ತಾರೆಯೇ ಹೊರತು ತನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಇಂಥಾ ಸಂದರ್ಭ ಬಂದ್ರೆ ಇಡೀ ಹಿಂದೂ ಸಮಾಜವೇ ಒಟ್ಟಾಗಬೇಕು. ಯಾಕೆಂದರೆ ಮುಂದಿನ 50 ವರ್ಷದ ಬಳಿಕ ನಮ್ಮ ಮಕ್ಕಳು ಹಿಂದೂ ಸಮಾಜಕ್ಕಾಗಿ ಏನು ಮಾಡಿದ್ರಿ ಅಂತ ಕೇಳಿದರೆ ಉತ್ತರಿಸುವ ಸಲುವಾಗಿ ನಾವೆಲ್ಲಾ ಕೆಲಸ ಮಾಡಬೇಕು ಎಂದು ಶೇಣವ ತಿಳಿಸಿದ್ದಾರೆ. ನನಗೆ ಮೂರು ಸಲ ಅನ್ಯ ಕೋಮಿನ ಯುವಕರು ದಾಳಿ ನಡೆಸಿದ್ದಾರೆ, ಆದರೆ ನಾನು ನಿರಂತರವಾಗಿ ಹನುಮಾನ್ ಚಾಲೀಸ್ ಪಠಿಸಿದರ ಫಲವಾಗಿ ಇಂದು ನಾನು ಬದುಕುಳಿದಿದ್ದೇನೆ ಎಂದು ತಿಳಿಸಿದರು. ಮುಖಂಡರಾಧ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ದೋಗು ಪೂಜಾರಿ ಮಟ್ಟಿ , ಮಾಜಿ ತಾಲೂಕು ಪಂ. ಅಧ್ಯಕ್ಷ ಹರೀಶ್ ಮೂಡುಶೆಡ್ಡೆ ಮತ್ತಿತರು ಮಾತನಾಡಿದರು . ವಿಷ್ಣು ಕಾಮತ್ ಗುರುಪುರ, ಭುಜಂಗ ಕುಲಾಲ್, ಚಂದ್ರಹಾಶ ಶೆಟ್ಟಿ , ಮಾರಪ್ಪ ಶೆಟ್ಟಿ , ರಾಮ ಪೂಜಾರಿ , ಹರೀಶ್ ಪೂಜಾರಿ , ವಾದಿರಾಜ ಕಲ್ಲೂರಾಯ ನಿರೂಪಿಸಿದರು . ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನಿಸಲಾಯಿತು . ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು .












