ಬಂಟ್ವಾಳ:ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ಪ್ರಸಿದ್ಧ ರಾಯರಚಾವಡಿ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಇದೇ 30ರಂದು ಸಂಜೆ ಗಂಟೆ 5.30ಕ್ಕೆ ಇಲ್ಲಿನ ಕಾರಣಿಕ ಪ್ರಸಿದ್ಧ ಪಂಜುರ್ಲಿ ದೈವಕ್ಕೆ ‘ಎಣ್ಣೆ ಬೂಲ್ಯ’ ಕಾರ್ಯಕ್ರಮ ನಡೆಯಲಿದೆ.
ಅಂದು ರಾತ್ರಿ 9.30 ಗಂಟೆಗೆ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.


ಈ ಬಾರಿ ದೈವಸ್ಥಾನದಲ್ಲಿ ಒಟ್ಟು ರೂ 15ಲಕ್ಷ ವೆಚ್ಚದಲ್ಲಿ ನೂತನ ಪಾಕಶಾಲೆ, ಶೌಚಾಲಯ , ಬಾವಿ ರಚನೆ, ಅಶ್ವತ್ಥ ಕಟ್ಟೆ ನಿರ್ಮಾಣಗೊಂಡಿದೆ.
ಇದೇ 29ರಂದು ಬೆಳಿಗ್ಗೆ ಗಣಹೋಮ, ಮುಖ್ಯಪ್ರಾಣ ಪೂಜೆ, ನಾಗತಂಬಿಲ ಮತ್ತು ಅಶ್ವತ್ಥ ಕಟ್ಟೆ ಪ್ರತಿಷ್ಠೆ ಮತ್ತು ವಿವಾಹ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ದುರ್ಗಾ ನಮಸ್ಕಾರ ಪೂಜೆ, ದೈವಗಳ ಭಂಡಾರ ಹೊರಟು ಪಿಲಿಚಾಮುಂಡಿ-ಕಲ್ಕುಡ ದೈವಗಳ ನೇಮೋತ್ಸವ ಮತ್ತು ವಲಸರಿ ಕಾರ್ಯಕ್ರಮ ನಡೆಯಲಿದೆ. ಈ ವಾರ್ಷಿಕನೇಮೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯ ಹಲವಾರು ಮಂದಿ ಭಕ್ತರು ಶ್ರಮದಾನ ನಡೆಸುತ್ತಿದ್ದಾರೆ ಎಂದು ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ ತಿಳಿಸಿದ್ದಾರೆ.

