ಕಾಯ್ಕಿಣಿ ಸ್ನೇಹ ಸಾಹಿತ್ಯಿಕವಾಗಿ ಬೆಳೆಯಲು ಸ್ಪೂರ್ತಿ : ಡಾ| ವ್ಯಾಸರಾಯ ನಿಂಜೂರು
ಮುಂಬಯಿ: ಜಯಂತ್ ಕಾಯ್ಕಿಣಿ ಅವರ ಜೊತೆ ಕಳೆದ ಕ್ಷಣಗಳು ಅವರ ನಡುವಿನ ಸ್ನೇಹ ಮುಂದೆ ಸಾಹಿತ್ಯಿಕವಾಗಿ ಬೆಳೆಯಲು ಸ್ಪೂರ್ತಿಯಾಗಿದೆ ಎಂದು ಎಂದು ಹಿರಿಯ ಪತ್ರಕರ್ತ, ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು ತಿಳಿಸಿದರು. ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮೈಸೂರು ಅಸೋಸಿಯೇಶನ್ನ ಅಧ್ಯಕ್ಷೆ ಕೆ.ಕಮಲಾ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿನ ಪ್ರಸಿದ್ಧ ಲೇಖಕಿ, ವಿಮರ್ಶಕಿ, ಮಹಿಳಾ ಸಂಘಟಕಿ ಡಾ| ಮಮತಾ ರಾವ್ ಅವರ ಕೃತಿ ಜಯಂತ್ ಕಾಯ್ಕಿಣಿ ಅವರ `ಕಥಾವರಣ’ ಕೃತಿ ಬಿಡುಗಡೆಗೊಳಿಸಿ ಡಾ| ನಿಂಜೂರು ಮಾತನಾಡಿ ಕಾಯ್ಕಿಣಿ ಅವರ ದೈನಂದಿನಜೀವನದ ಸಣ್ಣ ಸಣ್ಣ ವಿಷಯಗಳು ಸಾಹಿತ್ಯ ರಚನೆಗೆ ಪ್ರೇರಣೆ ನೀಡುವ ಬಗೆಯನ್ನು ವಿವರಿಸಿದರು.

ಕಣ್ತೆರೆದು ಬದುಕಬೇಕು ಕಣ್ಮುಚ್ಚಿ ಬರೆಯಬೇಕು. ಸತತ ಧ್ಯಾನ ಬೆಳೆಸುವುದೇ ಸಾಹಿತ್ಯ. ನಮ್ಮಲ್ಲಿ ಸಾಹಿತ್ಯ ಚರಿತ್ರೆ ಮತ್ತು ಮನುಷ್ಯ ಚರಿತ್ರೆ ಎರಡು ವಿಧವಿದೆ. ಇಲ್ಲಿ ನನಗೆ ಇಷ್ಟವಾಗುವುದು ಮನುಷ್ಯ ಚರಿತ್ರೆ. ಇಲ್ಲಿ ಮಾನವನ ಭಾವನೆಗಳು ದಿನ ನಿತ್ಯದ ಅನುಭವಗಳಿವೆ. ಕಸ ತುಂಬಿದ ಮನಸ್ಸುಗಳಿಂದ ನಮ್ಮನ್ನು ನಾವು ಬಚಾವು ಮಾಡಿಕೊಳ್ಳಲು ಸಾಹಿತ್ಯವನ್ನು ಅವಲಂಬಿಸಬೇಕು ಎಂದು ಜಯಂತ್ ಕಾಯ್ಕಿಣಿ ನಾಡಿನ ಹೆಸರಾಂತ ಸಾಹಿತಿ ಡಾ| ಜಯಂತ ಕಾಯ್ಕಿಣಿ ತಿಳಿಸಿದರು.
ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವಿಕ ನುಡಿಗಳನ್ನಾಡಿ ಜಯಂತ್ ಕಾಯ್ಕಿಣಿ ಅವರು ಒಟ್ಟು ಸಾಹಿತ್ಯ ಅವಲೋಕನ ಸವಿದವರು. ಅವರು ಸಾಹಿತ್ಯ ಸ್ನೇಹದ ಕಡಲು. ವರ್ಣರಂಜಿತ ವ್ಯಕ್ತಿತ್ವವುಳ್ಳವರಾಗಿದ್ದರು ಸರಳ ಜೀವಿ ಎಂದರು. ಡಾ|ಬಿ.ಆರ್.ಮಂಜುನಾಥ, ಕೆ. ಮಂಜುನಾಥಯ್ಯ, ನಿತ್ಯಾನಂದ ಡಿ.ಕೋಟ್ಯಾ, ರತ್ನಾಕರ ಆರ್.ಸೆಟ್ಟಿ, ಡಾ| ವಾಣಿ ಉಚ್ಚಿಲ್ಕರ್, ಡಾ| ಮಿತ್ರಾ ವೆಂಕಟ್ರಾಜ್, ಡಾ| ಈಶ್ವರ ಅಲೆವೂರು ಮತ್ತಿತರ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದು, ಪದ್ಮನಾಭ ಸಿದ್ಧಕಟ್ಟೆ ಪ್ರಾರ್ಥನೆಯನ್ನಾಡಿದರು. ಡಾ| ಜ್ಯೋತಿ ಸತೀಶ್ ಎರ್ಮಾಳ್ ಅವರು ಡಾ| ಮಮತಾ ರಾವ್ ಅವರಸಂದೇಶ ವಾಚಿಸಿದರು. ಕನ್ನಡ ವಿಭಾಗದ ಸಂಶೋಧನಾ ಸಹಾಯಕಿ ರಮಾ ಉಡುಪ ಕೃತಿಯ ಊರಣ ತೆರೆದಿಟ್ಟರು. ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿದರು. ನಾರಾಯಣ ನವಿಲೇಕರ್ ಧನ್ಯವದಿಸಿದರು.





