ಬಂಟ್ವಾಳ: ಧನಾತ್ಮಕ ಚಿಂತನೆಯ ಮೂಲಕ ನಾಟಿ ಊರಿನ ಜನರು ಸುಮಾರು ಒಂದು ಕೋಟಿಗೂ ಅಕ ವೆಚ್ಚದ ದೇವಸ್ಥಾನ ನಿರ್ಮಾಣ ಮೂಲಕ ಎಲ್ಲಾ ಭಗವದ್ಭಕ್ತರಿಗೆ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಶಂಭೂರು ಸರಕಾರಿ ಪ್ರೌಢ ಶಾಲಾ ದತ್ತಿ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.


ಅವರು ಜ. 15ರಂದು ನರಿಕೊಂಬು ಗ್ರಾಮ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಒಂದು ಕಾಲದಲ್ಲಿ ಹೇಗಿದ್ದ ದೇವಸ್ಥಾನ ಈಗ ಹೇಗಾಗಿದೆ ಎಂಬುದೇ ಇಲ್ಲಿನ ಜನರ ಪ್ರಯತ್ನಶೀಲತೆಗೆ ಸಾಕ್ಷಿ ಆಗುತ್ತದೆ. ಒಂದು ಊರಿನ ದೇವಾಲಯ ಸುಸ್ಥಿತಿಯಲ್ಲಿದೆ ಎಂದರೆ ಅಲ್ಲಿನ ಜನತೆ ಧಾರ್ಮಿಕ ನೆಲೆಗಟ್ಟಿನಲ್ಲಿ ಇದ್ದಾರೆ ಎಂಬುದಾಗಿದೆ. ಅಂದರೆ ಜನರು ಸಜ್ಜನರು, ಸತ್ಯವಂತರು, ಪ್ರಾಮಾಣಿಕರು ಎಂದೆನಿಸುವುದು.
ಒಂದು ದೇವಸ್ಥಾನ ಕಟ್ಟುವುದು ಸುಲಭ, ಅದನ್ನು ಮುಂದಕ್ಕೆ ನಿರ್ವಹಿಸಿಕೊಂಡು ಹೋಗುವುದು ಅಷ್ಟೇ ಮಹತ್ವದ್ದಾದ ಕೆಲಸ. ಒಮ್ಮೆ ಸುಂದರವಾಗಿ ನಿರ್ಮಿಸಬಹುದು. ನಂತರದ ದಿನಗಳಲ್ಲಿ ಅದನ್ನು ಪ್ರಗತಿಯ ಹಂತಕ್ಕೆ ತರಬೇಕಾದರೆ ಜನರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ ಮಾತನಾಡಿ ಧಾರ್ಮಿಕ ಐಕ್ಯತೆ ಇದ್ದಾಗ ಮಾತ್ರ ನಮಗೆ ಸಮಾಜದಲ್ಲಿ ನೆಮ್ಮದಿ, ಶಾಂತಿ, ಬದುಕಿಗೆ ಒಂದು ನೆಲೆ ಇರುತ್ತದೆ. ಅನೇಕ ಜಾತಿ ಸಮಾಜಗಳು ನಮ್ಮಲ್ಲಿ ಇದ್ದರೂ ನಾವು ಧಾರ್ಮಿಕವಾಗಿ ಒಂದಾಗುತ್ತೇವೆ. ಒಟ್ಟು ಸಮಾಜಕ್ಕಾಗಿ ದುಡಿಯುತ್ತೇವೆ. ಇದುವೆ ನಿಜವಾದ ಧಾರ್ಮಿಕ ಪ್ರಜ್ಞೆ ಎಂದು ವಿವರಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ ಮಹಿಳೆಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಮಹಿಳೆಯೊಬ್ಬಳು ಮುಂದೆ ಬಂದರೆ ಒಂದು ಕುಟುಂಬ ಮುಂದೆ ಬಂದಂತೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕೇವಲ ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಯುವಕ ಯುವತಿಯರ ಸಾಮಾಜಿಕ ಸಂಘಟನೆಗಳು ಅನ್ಯಾಯದ ವಿರುದ್ದ ಎದ್ದು ನಿಲ್ಲಬೇಕು ಎಂದು ಕರೆ ನೀಡಿದರು.
ವೇದಿಕೆಯಿಂದ ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಶಿಕ್ಷಕ ವೆಂಕಪ್ಪ ಬಂಗೇರ ನಾಟಿ, ಡಾ| ಸುಬ್ರಹ್ಮಣ್ಯ ಭಟ್ ದಿಂಡಿಕೆರೆ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸಭೆ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯ ಕಿಶೋರ್ ಶೆಟ್ಟಿ, ಮಾಜಿ ಅಧ್ಯಕ್ಷ ಆನಂದ ಸಾಲಿಯಾನ್, ಪಾಣೆಮಂಗಳೂರು ರೈ.ಸೇ.ಸ.ಸಂಘದ ನಿರ್ದೆಶಕ ಪ್ರೇಮನಾಥ ಶೆಟ್ಟಿ ಅಂತರ, ಎಎಂಆರ್ ಸಂಸ್ಥೆಯ ಶ್ರೀನಿವಾಸ ಅಂಕಲ್, ಉದ್ಯಮಿ ಜಗದೀಶ ಭಟ್ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ, ಗೌ. ಅಧ್ಯಕ್ಷ ಡಾ| ಪ್ರದೀಪ್ ಕುಮಾರ್ ಶೆಟ್ಟಿ ನಾಟಿಗುತ್ತು, ಬ್ರಹ್ಮಕಲಶ ಸಮಿತಿ ಗೌ. ಅಧ್ಯಕ್ಷ ಪದ್ಮನಾಭ ಮಯ್ಯ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ. ಕೃಷ್ಣಪ್ಪ ನಾಯ್ಕ ಸ್ವಾಗತಿಸಿ, ಪತ್ರಕರ್ತ ರಾಜಾ ಬಂಟ್ವಾಳ ಪ್ರಸ್ತಾವನೆ ನೀಡಿದರು. ಗಾಯತ್ರಿ ನಾಟಿ ವಂದಿಸಿದರು. ವಿಜಯ ಯೋಗೀಶ ಸಪಲ್ಯ ಕಾರ್ಯಕ್ರಮ ನಿರ್ವಹಿಸಿದರು
