ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದಲ್ಲಿ ಸಾಧಕ ಕ್ರೀಡಾಪಟುಗಳಿಗೆ ಸ್ನಾತಕೋತ್ತರ ಸೀಟುಗಳನ್ನು ಮೀಸಲಿರಿಸಿದ್ದೇವೆ. ಕಾಲೇಜುಗಳು ಪದವಿ ವಿಭಾಘದಲ್ಲಿ ಕನಿಷ್ಠ 5 ಸೀಟುಗಳನ್ನಾದರೂ ಕ್ರೀಡಾಪಟುಗಳಿಗೆ ಮೀಸಲಿರಿಸಬೇಕು. ಅಯ್ದ ಕ್ರೀಡೆಗಳ ತರಬೇತಿಗೆ ವಿ.ವಿ. ವಿವಿಧ ರೀತಿಯಲ್ಲಿ ಸಹಕಾರ ನೀಡಲು ಬದ್ಧವಿದೆ. ಶಿಕ್ಷಣ ಸಂಸ್ಥೆಗಳು ಕ್ರೀಡಾಪಟುಗಳನ್ನು ಸಂಖ್ಯೆ ಹೆಚ್ಚಾಗುವ ಬಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದು ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ ಹೇಳಿದರು.

ಮೂಡುಬಿದಿರೆಯ ಧವಲಾ ಕಾಲೇಜು ಹಾಗೂ ಮಂಗಳೂರು ವಿ.ವಿ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ಅಂತರ್ ಕಾಲೇಜು ಮಹಿಳೆಯರು ಮತ್ತು ಪುರುಷರ ವೇಟ್ ಲಿಫ್ಟಿಂಗ್ ಹಾಗೂ ಪುರಷರ ವಿಭಾಗದ ದೇಹದಾಢ್ರ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿದರು. ಧವಲಾ ಕಾಲೇಜಿನ ಶ್ರೀಕ್ಷೇತ್ರ ಧರ್ಮಸ್ಥಳ ಮಾತೃಶ್ರೀ ಸಭಾಭವನದಲ್ಲಿ ಸ್ಪರ್ಧೆಗಳಿಗೆ ಕಾಮನ್ವೆಲ್ತ್ ಪದಕ ವಿಜೇತ, ಮೂಡುಬಿದರೆ ಸಿಂಡಿಕೇಟ್ ಬ್ಯಾಂಕ್ನ ಹಿರಿಯ ಪ್ರಬಂಧಕ ಪುಷ್ಪರಾಜ್ ಹೆಗ್ಡೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಸಿಗುವುತ್ತಿರುವುದು ಆಶಾದಾಯಕ ಬೆಳವಣಿಗೆ. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು, ಪರಿಶ್ರಮದ ಮೂಲಕ ಕ್ರೀಡಾ ಸಾಧನೆಯನ್ನು ಮಾಡುವಂತಾಗಬೇಕೆಂದರು.
ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ವಿ.ವಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವೇಣುಗೋಪಾಲ ನೋಂಡಾ, ಡಿ.ಜೆ.ವಿ.ವಿ ಸಂಘದ ಹಿರಿಯ ಸದಸ್ಯ ಕೆ.ಹೇಮರಾಜ್, ಕಾಲೇಜಿನ ಹಳೆ ವಿದ್ಯಾರ್ಥಿ ಪವನ್ ಕೋಟ್ಯಾನ್ ಉಪಸ್ಥಿತರಿದ್ದರು.
ಧವಲಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಾಂತಿರಾಜ ಕಾಂಬ್ಳಿ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಹನಾ ವಂದಿಸಿದರು.
