ಮುಂಬಯಿ: ಬಿಎಸ್.ಕೆ.ಬಿ. ಎಸೋಸಿಯೇಶನ್, ಸಾಯನ್ ಇದರ ಅಂಗ ಸಂಸ್ಥೆಯಾದ ಹಿರಿಯ ನಾಗರಿಕರ ಆಶ್ರಯಧಾಮ ‘ಆಶ್ರಯ’, ನೇರುಲ್ ಇದರ ಎಂಟನೇ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ಆಶ್ರಯದ ವಿ.ಎಚ್. ಸೋಮೇಶ್ವರ್ ಸಭಾಗೃಹದಲ್ಲಿ ನೆರವೇರಿತು.

ಮೊದಲಿಗೆ ಸಂಘದ ಅಧ್ಯಕ್ಷರು ಹಾಗೂ ಅತಿಥಿಗಳು ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿಂಧು ನಾಯರ್ ನಿರ್ದೇಶನದಲ್ಲಿ ಆಶ್ರಯದ ಹಿರಿಯ ನಾಗರಿಕರ ದಾಂಡಿಯ ಹಾಗೂ ಗರ್ಭಾ ನೃತ್ಯ, ಸಂಘದ ಯುವ ವಿಭಾಗದ ಪ್ರಸ್ತುತಿಯಲ್ಲಿ ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನ ರಂಜಿಸಿದವು. ವಿದ್ಯಾ ರಾವ್ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಗೈದರು. ಇದೇ ಸಂದರ್ಭದಲ್ಲಿ ನೇರವೇರಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಡಾ| ಸುರೇಶ್ ಎಸ್. ರಾವ್ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿsಯಾಗಿ ಶ್ರೀ ಬಿ. ನಾರಾಯಣ, ಸಮೂಹಾಧ್ಯಕ್ಷರು, ರಿಲಯನ್ಸ್ ಇಂಡಸ್ಟ್ರೀಸ್, ಹಾಗೂ ಗೌರವ ಅತಿಥಿsಗಳಾಗಿ ಶ್ರೀ ವೈ, ಗುರುರಾಜ್, ಆಡಳಿತ ನಿರ್ದೇಶಕರು, ಶಾಲಿಮಾರ್ ವಾಲ್ವ್ಸ್, ಹಾಗೂ ಶ್ರೀ ಎಮ್. ಎಚ್. ಮುರಳೀಧರ್, ನಿರ್ದೇಶಕರು, ಸಮೀರ್ ಸಾಂಘ್ವಿ ಎಸೋಸಿಯೇಶನ್ಸ್ ಆಗಮಿಸಿದ್ದರು. ಆಶ್ರಯದ ಅಧ್ಯಕ್ಷರಾದ ಶ್ರೀ ವಾಮನ್ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಅತಿಥಿsಗಳಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಲು ಹೊದಿಸಿ ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಆಶ್ರಯದ ಕಾರ್ಯ ನಿರ್ವಾಹಕಿ ಚಂದ್ರಾವತಿ ರಾವ್ ಆಶ್ರಯ ನಡೆದು ಬಂದ ದಾರಿ ಹಾಗೂ ಕಾರ್ಯ ವೈಖರಿಗಳ ಬಗ್ಗೆ ಟಿಪ್ಪಣಿ ನೀಡಿದರು. ಗೌರವ ಅತಿಥಿಗಳು, ಹಿರಿಯ ನಾಗರಿಕರು ಆಶ್ರಯದಲ್ಲಿ ಸಂತೃಪ್ತ ಜೀವನವನ್ನು ನಡೆಸುವುದನ್ನು ಕಂಡು ತಮ್ಮ ಸಂತೋಷ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿ ಬಿ. ನಾರಾಯಣ್ ಮಾತನಾಡುತ್ತಾ ಹಿರಿಯ ನಾಗರಿಕರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಸಮಾಜದ ಕರ್ತವ್ಯ. ಬಿ.ಎಸ್.ಕೆ.ಬಿ. ಎಸೋಸಿಯೇಶನ್ ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಮಾದರಿ ಸಂಸ್ಥೆಯಾಗಿ ಮೆರೆದಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ಅಧ್ಯಕ್ಷರಾದ ಡಾ ಸುರೇಶ್ ಎಸ್ ರಾವ್ ಆಶ್ರಯದ ಬಗ್ಗೆ ಮಾತನಾಡುತ್ತಾ ಆಶ್ರಯ ಇಂದು ನವಿ ಮುಂಬಯಿ ಪರಿಸರದಲ್ಲಿ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿರುವ ಹಿರಿಯರು ತಮ್ಮ ಬಾಳಿನ ಸಂಧ್ಯಾಕಾಲವನ್ನು ಅತ್ಯಂತ ಸಂತೋಷದಿಂದ ಕಳೆಯುತ್ತಿದ್ದಾರೆ. ಇದನ್ನು ಕಂಡಾಗ ನಮಗೆ ಧನ್ಯತಾ ಭಾವ ಉಂಟಾಗುತ್ತದೆ ಎಂದು ಹೇಳಿದರು. ಸಂಘದ ಹಿರಿಯ ಸದಸ್ಯೆ ಶ್ರೀಮತಿ ರತ್ನಾ ಆಚಾರ್ಯರವರ ಪ್ರಾಯೋಜಕತ್ವದಲ್ಲಿ ವರ್ಷಂಪ್ರತಿ ಕೊಡಲ್ಪಡುವ ‘ಸ್ಟಾರ್ ಆಫ್ ಆಶ್ರಯ’ ಪ್ರಶಸ್ತಿಯನ್ನು ಆಶ್ರಯ ನಿವಾಸಿ ಶ್ರೀ ಬಾಲಾಜಿ ಅಯ್ಯರ್ ಅವರಿಗೆ ಪ್ರದಾನಿಸಲಾಯಿತು. ಶ್ರೀಮತಿ ಚಿತ್ರಾ ಮೇಲ್ಮನೆ ಕಾರ್ಯಕ್ರಮ ನಿರೂಪಿಸಿದರು. ಆಶ್ರಯದ ಕಾರ್ಯದರ್ಶಿ ಶ್ರೀ ಪ್ರಶಾಂತ್ ಹೆರ್ಲೆ ಧನ್ಯವಾದ ಸಮರ್ಪಿಸಿದರು. ನಂತರ ಇದೇ ವೇದಿಕೆಯಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ, ಇತ್ತೀಚಿಗೆ ನಿಧನರಾದ ಆಶ್ರಯದ ನಿರ್ಮಾಣಕ್ಕೆ ಕಾರಣೀಭೂತರೂ, ಸಂಸ್ಥೆಯ ಹಿರಿಯ ಸದಸ್ಯರೂ ಆದ ದಿ. ಅನಂತಕೃಷ್ಣ ಹೆಬ್ಬಾರ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
