ಸುದ್ದಿ9 ಕೈಕಂಬ: ಮಂಗಳೂರಿನಿಂದ ಗುರುಪುರ ಕೈಕಂಬಕ್ಕೆ ಸಾಗುವ ರಸ್ತೆಯು ವಾಹನ ಚಾಲಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದ್ದು ಭಾನುವಾರ ನಡೆದ ಅಪಘಾತಕ್ಕೆ ಎರಡೂವರೆ ವರ್ಷ ಪ್ರಾಯದ ಕಂದಮ್ಮವೊಂದು ಬಲಿಯಾಗಿದ್ದರೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತಪಟ್ಟ ಬಾಲಕನನ್ನು ಅವಿನಲ್ ಫಯಾಜ್ ಎಂದು ಗುರುತಿಸಲಾಗಿದೆ. ಈತ ತನ್ನ ಮಾವ ರೊನಾಲ್ಡ್ ಅವರ ಜೊತೆ ಸ್ಕೂಟಿಯಲ್ಲಿ ಮಂಗಳೂರಿನಿಂದ ಕೈಕಂಬದತ್ತ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಧಾವಿಸಿ ಬಂದ ಜೀಪ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಫಯಾಜ್ ರಸ್ತೆಗೆಸೆಯಲ್ಪಟ್ಟು ಆತನ ಮೇಲೆ ಜೀಪ್ನ ಚಕ್ರ ಹರಿದ ಕಾರಣ ಆತ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ರೊನಾಲ್ಡ್ಗೆ ಕೂಡಾ ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ದು ಆತನ ಒಂದು ಕಾಲು ಮುರಿತಕ್ಕೊಳಗಾಗಿದೆ. ಹಫೀಜ್ ಮಂಗಳೂರಿನ ಬೋಂದೇಲ್ ನಿವಾಸಿ ಎಂದು ಹೇಳಲಾಗುತ್ತಿದ್ದು, ಜೀಪ್ನ ಲೈನಲ್ ಕಟ್ ಆದ ಕಾರಣ ನಿಯಂತ್ರಣ ಕಳೆದುಕೊಂಡು ರಸ್ತೆಯ ವಿರುದ್ಧ ಭಾಗದಲ್ಲಿ ಚಲಿಸಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತಪಟ್ಟ ಬಾಲಕನ ತಾಯಿಗೆ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಆಕೆ ಗರಬಡಿದವರಂತಾಗಿ ಕುಸಿದು ಬಿದ್ದಿದ್ದು ಇಡೀ ಕುಟುಂಬದ ರೋದನ ಮುಗಿಲು ಮುಟ್ಟಿತ್ತು. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
