ಸುದ್ದಿ9 ಕಿನ್ನಿಗೋಳಿ ;ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಕೋರೆಯಲ್ಲಿನ ಶೆಡ್ ಮನೆಯಲ್ಲಿ ಸಂಶಯಾಸ್ಪದ ಸ್ಪೋಟಕ ಸಿಡಿದು ಇಬ್ಬರು ಕಾರ್ಮಿಕರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ (ಕೊನಗಪಾಡಿ ಸೇಲಂ) ಪರಮನ್ ಉತ್ತಂಡಿ (25 ವರ್ಷ) ಹಾಗೂ ಅವರ ತಾಯಿ ಎರಿಚಮ್ಮ (53 ವರ್ಷ) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ 11.50 ರ ಸುಮಾರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದ್ದಕ್ಕಿಂದ್ದತೆಯೇ ಭಾರೀ ಸ್ಪೋಟ ಸಂಭವಿಸಿ ಇಬ್ಬರೂ ಮೃತಪಟ್ಟರು. ಸ್ಫೋಟ ತೀವ್ರತೆಯಿಂದ ಎರಿಚಮ್ಮ ದೇಹ ಛಿದ್ರ ಛಿದ್ರಗೊಂಡಿದ್ದು ಕೈ ಒಂದಡೆ , ತಲೆ ಒಂದು ಕಡೆ , ಕರಲಾದ ದೇಹ 50 ಅಡಿ ಅಳದ ಕೆಳಗಿನ ಕಲ್ಲಿನ ಕೋರೆಯಲ್ಲಿ ಬಿದ್ದಿತ್ತು. ಮನೆಯ ಸಾಮಾನು ಫ್ಯಾನ್ ಎಲ್ಲಾ ಕಳಚಿ ಬಿದ್ದು ಬಿಟ್ಟಿದೆ. ಮನೆಯ ಮಾಡು ಸಂಪೂರ್ಣ ಧರಾಶಾಯಿಯಾಗಿದೆ. ಗೋಡೆಗಳು ಬಿದ್ದಿದ್ದು ಸ್ಥಳದಲ್ಲೆ ಮೃತಪಟ್ಟ ಪರಮನ್ ಉತ್ತಂಡಿಯ ದೇಹ ಕಲ್ಲಿನ ಅಡಿಯಲ್ಲಿ ಕೂತ ಸ್ಥಿತಿಯಲ್ಲಿಯೇ ಸಿಕ್ಕಿಕೊಂಡಿತ್ತು . ಮನೆಯ ಗ್ಯಾಸ್ ಸಿಲಿಂಡರ್ ಅಥವಾ ಸ್ಪೋಟಕದ ತಯಾರಿಕೆಯ ಹಂತದಲ್ಲಿರುವಾಗ ಸ್ಪೋಟವಾಗಿರಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ.ಸ್ಪೋಟಕಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾದ ತಗಡು ಹಾಗೂ ಸಿಮೆಂಟ್ ಶೆಡ್ನೊಳಗೆ ಇರಿಸಲಾಗಿತ್ತು. ಕಲ್ಲಿನ ಕೋರೆಯ ಪಕ್ಕದಲ್ಲಿ ಕಾರ್ಮಿಕರ ಶೆಡ್ ಇದ್ದು ಇದರಲ್ಲಿ ತಮಿಳುನಾಡು ಸಹಿತ ರಾಜ್ಯದ ವಿವಿಧ ಭಾಗದ 20 ಕ್ಕೂ ಮಿಕ್ಕಿ ಕುಟುಂಬಗಳು ವಾಸವಾಗಿದ್ದು ಕೆಲವು ಸಿಮೆಂಟ್ ಶೀಟ್ ಮನೆಗಳಾದರೆ ಮತ್ತೆ ಕೆಲವು ಪ್ಪಾಸ್ಟಿಕ್ ಹೊದಿಕೆಯ ಮನೆಗಳಿವೆ. ಸ್ಪೋಟದ ಘಟನೆಯಿಂದ ಕೆಲವು ಮನೆಗಳು ಛಿದ್ರಗೊಂಡಿವೆ.

ಬದಿಯ ಮನೆಯ ಶಿವಮೊಗ್ಗ ಮೂಲದ ನಾಗರಾಜ್ (34 ವರ್ಷ), ಪತ್ನಿ ಯಶೋದಾ (28) ಹಾಗೂ ಪೂಜಾ (10) ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಜಾದಿನವಾದ್ದರಿಂದ ಹೆಚ್ಚಿನ ಕಾಮರ್ಿಕರು ವಾರದ ಪಡಿತರ ಸಾಮಾಗ್ರಿಗಳನ್ನು ತರಲು ಮೂರುಕಾವೇರಿ ಕಿನ್ನಿಗೋಳಿಗೆ ಹೋಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮುಂಜಾಗೃತ ಕ್ರಮ ವಹಿಸದೇ ಇದ್ದುದರಿಂದ ಈ ದುರಂತ ಸಂಭವಿಸಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಮುಲ್ಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಮೂಲ್ಕಿ ವೃತ್ತ ನೀರಿಕ್ಷಕ ರಾಮಚಂದ್ರ ನಾಯಕ್ ಭೇಟಿ ಘಟನೆಯ ಬಗ್ಗೆ ತನಿಖೆ ನಡೆಸುತಿದ್ದಾರೆ. ಕಂದಾಯ ಅಧಿಕಾರಿ ನಿತ್ಯಾನಂದ ದಾಸ್, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಉಪಾಧ್ಯಕ್ಷ ದಿವಾಕರ ಚೌಟ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಧಿಯ ವಿಪರ್ಯಸ ಪೆರಿಯಪ್ಪಯ್ಯ ಅವರ ಪತ್ನಿ ಮೃತೆ ಎರಿಚಮ್ಮ ಹಾಗೂ ಮಗ ಮೃತ ಪರಮನ್ ಉತ್ತಂಡಿ ಹಾಗೂ ಸುಮಾರು ನಾಲ್ಕು ಐದು ವರ್ಷಗಳ ಹಿಂದೆ ಕಲ್ಲಿನಕೋರೆಯಲ್ಲಿ ದುಡಿಯಲು ಬಂದಿದ್ದರು. ಪರಿಸರದಲ್ಲಿಯೇ ಉತ್ತಮ ನಡವಳಿಕೆಯ ಜನರಾಗಿದ್ದರು. ಎರಿಚಮ್ಮ ಅವರ ಮತ್ತೊಬ್ಬ ಮಗ ಮುರುಗ ತಮ್ಮ ಊರು ತಮಿಳುನಾಡಿಗೆ ಹೋಗಿದ್ದರು. ಮೂವರು ಹೆಣ್ಣು ಮಕ್ಕಳಲ್ಲಿ ಇಬ್ಬರಿಗೆ ವಿವಾಹವಾಗಿದ್ದು ಮತ್ತೊಬ್ಬಳಿಗೆ ಮದುವೆ ದಿನ ನಿಗದಿಯಾಗಿತ್ತು ಆಕೆಯ ಕುಟುಂಬದವರು ಪತ್ರಿಕೆಗೆ ತಿಳಿಸಿದ್ದಾರೆ.




